ಮಥುರಾ: ಪ್ರಧಾನಮಂತ್ರಿ ಮತ್ತು ವಿತ್ತ ಸಚಿವರಿಗೆ ಅರ್ಥಶಾಸ್ತ್ರದ ಬಗ್ಗೆ ಅರಿವಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದ್ದಾರೆ.
ಅಲ್ಲದೆ, ದೇಶದಲ್ಲಿನ ಬೆಲೆ ಏರಿಕೆಗೆ ಕೇಂದ್ರ ಹಣಕಾಸು ಸಚಿವರೇ ಹೊಣೆಯಾಗಿದ್ದು, ಅವರು ಯಾರನ್ನೂ ಸಂಪರ್ಕಿಸುವುದಿಲ್ಲ ಎಂದು ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸರ್ಕಾರಕ್ಕೆ ಅರ್ಥಶಾಸ್ತ್ರವು ಅರ್ಥವಾಗುತ್ತಿಲ್ಲ. ಈ ಬಗ್ಗೆ ಪ್ರಧಾನಿ ಅಥವಾ ಹಣಕಾಸು ಸಚಿವರಿಗೆ ತಿಳಿದಿಲ್ಲ. ಈ ವಿಚಾರವಾಗಿ ಅವರು ಯಾರ ಬಳಿಯಲ್ಲೂ ಸಮಾಲೋಚನೆ ನಡೆಸುವುದಿಲ್ಲ. ಬೆಳವಣಿಗೆ ದರ ಕುಸಿದಾಗ ಏನು ಮಾಡಬೇಕೆಂದು ಕೂಡ ಅವರಿಗೆ ತಿಳಿದಿಲ್ಲ' ಎಂದು ತಿಳಿಸಿದರು.
ಕೆಲವು ಹಿಂದೂ ಸಂಘಟನೆಗಳ ಪ್ರಕಾರ ಈಗ ಮಸೀದಿಗಳು ಇರುವ ಸ್ಥಳಗಳಲ್ಲಿ ಹಿಂದೂ ದೇವಾಲಯಗಳು ಇದ್ದವು, 'ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ, 1991 ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮೊಕದ್ದಮೆಗೆ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ' ಎಂದು ಹೇಳಿದರು.
1991ರ ಕಾಯ್ದೆಯ ಪ್ರಕಾರ ಧಾರ್ಮಿಕ ಸ್ಥಳಗಳನ್ನು ಹಿಂಪಡೆಯಲು ಅಥವಾ ಸ್ವರೂಪದಲ್ಲಿ ಬದಲಾವಣೆ ಮಾಡಲು ಮೊಕದ್ದಮೆಯನ್ನು ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಆಗಸ್ಟ್ 15, 1947 ರಿಂದ ಚಾಲ್ತಿಯಲ್ಲಿದ್ದ ಸ್ವರೂಪದಲ್ಲೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಾಯ್ದೆ ಹೇಳುತ್ತದೆ.
ಕಾಶಿ–ಮಥುರಾದ ಧಾರ್ಮಿಕ ಸ್ಥಳಗಳನ್ನು ಹಿಂದೂಗಳಿಗೆ ನೀಡಬೇಕು ಎಂದು ಕೆಲವು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.
'ಗಡಿ ವಿಚಾರವಾಗಿ ಚೀನಾದೊಂದಿಗೆ ಸರ್ಕಾರ ವ್ಯವಹರಿಸುತ್ತಿರುವ ರೀತಿ ಕೂಡ ನನಗೆ ತೃಪ್ತಿದಾಯಕವಾಗಿಲ್ಲ' ಎಂದು ಸ್ವಾಮಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.