ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ಜಯಂತಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಭಾನುವಾರ ಅವರಿಗೆ ಗೌರವ ಸಲ್ಲಿಸಿದರು.
ಬೋಸ್ ಅವರ 126ನೇ ಜಯಂತಿ ದಿನವಾದ ಇಂದು (ಜ.23) ‘ಪರಾಕ್ರಮ ದಿವಸ್’ ಕಾರ್ಯಕ್ರಮವನ್ನು ದೇಶದಲ್ಲಿ ಆಚರಿಸಲಾಗುತ್ತಿದೆ.
ದೆಹಲಿಯ ಇಂಡಿಯಾ ಗೇಟ್ ಸಮೀಪ ನೇತಾಜಿ ಸುಭಾಸ್ ಚಂದ್ರ ಬೋಸ್ ಪ್ರತಿಮೆಯನ್ನು ಗ್ರಾನೈಟ್ನಿಂದ ನಿರ್ಮಾಣ ಮಾಡಲಾಗಿದೆಇದು ಹೊಲೋಗ್ರಾಮ್ (ಲೇಸರ್ ರೀತಿಯ ಬೆಳಕಿನ ಕಿರಣಗಳಿಂದ ರೂಪಿಸಿರುವುದು) ಪ್ರತಿಮೆಯಾಗಿದೆ. ಪ್ರಧಾನಿ ಮೋದಿ ಅವರು ಬೋಸ್ ಪ್ರತಿಮೆಯನ್ನುಉದ್ಘಾಟಿಸಲಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವಾದ ಇಂದು ಭಾರತ ಅವರಿಗೆ ಕೃತಜ್ಞತೆಯಿಂದ ಗೌರವ ಸಲ್ಲಿಸುತ್ತದೆ. ಸ್ವತಂತ್ರ ಭಾರತದ ಕಲ್ಪನೆಗೆ ಬದ್ಧತೆಯಿಂದ ಅವರು ತೆಗೆದುಕೊಂಡ ಧೈರ್ಯಶಾಲಿ ನಿರ್ಧಾರಗಳು ಅವರನ್ನು ಖ್ಯಾತರನ್ನಾಗಿ ಮಾಡಿವೆ. ಅವರ ಆದರ್ಶಗಳು ಮತ್ತು ತ್ಯಾಗ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುತ್ತವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ಮರಿಸಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯ ದಿನವಾದ ಇಂದು ನಾನು ಅವರಿಗೆ ನಮಿಸುತ್ತೇನೆ. ಪ್ರತಿಯೊಬ್ಬ ಭಾರತೀಯರೂ ಬೋಸರು ರಾಷ್ಟ್ರಕ್ಕೆ ನೀಡಿದ ಮಹತ್ವದ ಕೊಡುಗೆಯ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ:ನೇತಾಜಿ |ಬದುಕಿನ ಮರು ಅವಲೋಕನ
1897 ರಲ್ಲಿ ಈ ದಿನ ಜನಿಸಿದ ಬೋಸ್ ಅವರ ಜನ್ಮದಿನಾಚರಣೆಯ ನೆನಪಿಗಾಗಿ ಜನವರಿ 23 ಅನ್ನು 'ಪರಾಕ್ರಮ ದಿವಸ್' ಎಂದು ಕೇಂದ್ರ ಸರ್ಕಾರ ಆಚರಣೆ ಮಾಡುತ್ತಿದೆ. ಕಳೆದ ವರ್ಷದಿಂದ ’ಪರಾಕ್ರಮ ದಿವಸ್’ ಆಚರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ:‘ನೇತಾಜಿ ಚಿತಾಭಸ್ಮ ತರುವ ಪ್ರಯತ್ನ ಯಾರೂ ಮಾಡಿಲ್ಲ’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.