ADVERTISEMENT

ಲಸಿಕೆ ಅಭಿಯಾನ: ದೆಹಲಿ ಸರ್ಕಾರದ ವ್ಯವಸ್ಥೆಯನ್ನು ಶ್ಲಾಘಿಸಿದ ನೆಟ್ಟಿಗರು

ಪಿಟಿಐ
Published 9 ಮೇ 2021, 9:05 IST
Last Updated 9 ಮೇ 2021, 9:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಅವರ ನೇತೃತ್ವದ ಸರ್ಕಾರವು ಮೂರನೇ ಲಸಿಕೆ ಅಭಿಯಾನಕ್ಕಾಗಿ ಕ್ರಮಬದ್ಧ ವ್ಯವಸ್ಥೆಯನ್ನು ಮಾಡಿದೆ’ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ಎಲ್ಲಾ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ ಶಾಂತಿಯುತವಾಗಿ ಲಸಿಕೆ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹಲವಾರು ಫಲಾನುಭವಿಗಳು ತಮ್ಮ ಅನುಭವಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಅರವಿಂದ ಕೇಜ್ರಿವಾಲ್‌ ಅವರಿಗೆ ಧನ್ಯವಾದಗಳು. ನೀವು ನಿಜವಾಗಲೂ ವಿಭಿನ್ನ ಮುಖ್ಯಮಂತ್ರಿ. ನಾನು ನಿನ್ನೆ ಲಸಿಕೆಯನ್ನು ಪಡೆದಿದ್ದೇನೆ. ಲಸಿಕಾ ಕೇಂದ್ರದಲ್ಲಿ ಅಚ್ಚುಕಟ್ಟಿನ ವ್ಯವಸ್ಥೆಯಿತ್ತು. ಅಲ್ಲಿ ಅಂತರವನ್ನು ಸರಿಯಾಗಿ ಪಾಲಿಸಲಾಗುತ್ತಿತ್ತು. ವೈದ್ಯರು ಎಲ್ಲಾ ಫಲಾನುಭವಿಗಳೊಂದಿಗೆ ಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದರು. ನೀವು ನಮ್ಮ ಸಿಎಂ ಎಂದು ಹೇಳಿಕೊಳ್ಳಲು ನಾವು ಹೆಮ್ಮೆ ಪಡುತ್ತೇವೆ’ ಎಂದು ಬಳಕೆದಾರರೊಬ್ಬರು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಲಸಿಕೆ ಪಡೆಯಲು ಬಂದವರನ್ನು ನಾವು ತುಂಬಾ ಹೊತ್ತು ಕಾಯಿಸುವುದಿಲ್ಲ. ಇದು ಹೆಚ್ಚಿನವರಿಗೆ ಇಷ್ಟವಾಗಿದೆ. ನಾವು ಪ್ರತಿಯೊಂದು ಸಣ್ಣ, ಸಣ್ಣ ವಿಷಯಗಳ ಮೇಲೆ ಗಮನ ಇಡುತ್ತೇವೆ. ಇದರಿಂದಾಗಿ ಲಸಿಕೆ ಅಭಿಯಾನವು ಉತ್ತಮವಾಗಿ ನಡೆಯುತ್ತಿದೆ’ ಎಂದು ಪಶ್ಚಿಮ ವಿನೋದ್‌ ನಗರದ ಆರ್‌ಎಸ್‌ಬಿವಿಲಸಿಕಾ ಕೇಂದ್ರದ ಮುಖ್ಯಸ್ಥ ಲಕ್ಷ್ಮೀ ಕಾಂತ್‌ ದುಬೆ ಅವರು ತಿಳಿಸಿದರು.

‘ಮೇ 3ರಿಂದ ಆರ್‌ಎಸ್‌ಬಿವಿ ಲಸಿಕಾ ಕೇಂದ್ರದ ಐದು ಸ್ಥಳಗಳಲ್ಲಿ ಪ್ರತಿನಿತ್ಯ ಸುಮಾರು 750 ಜನರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಕೊಠಡಿಗಳನ್ನು ದಿನಕ್ಕೆ ಎರಡು ಬಾರಿ ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

‘ದೆಹಲಿಯಲ್ಲಿ ಕೋವಿಡ್‌ ಲಸಿಕಾ ಕೇಂದ್ರಗಳನ್ನು ಹೆಚ್ಚಿಸಲಾಗುವುದು. ಮುಂದಿನ ಮೂರು ತಿಂಗಳಲ್ಲಿ 2.6 ಕೋಟಿ ಲಸಿಕೆಯ ಡೋಸ್‌ಗಳನ್ನು ದೆಹಲಿಗೆ ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗಿದೆ. ಪ್ರಸ್ತುತ ದೆಹಲಿಯಲ್ಲಿ 100 ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋವಿಡ್‌ ಲಸಿಕಾ ಕೇಂದ್ರಗಳನ್ನು 250-300ಕ್ಕೆ ಹೆಚ್ಚಿಸಲಾಗುವುದು’ ಎಂದು ಅರವಿಂದ ಕೇಜ್ರಿವಾಲ್‌ ಅವರು ಶನಿವಾರ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.