ADVERTISEMENT

ನವದೆಹಲಿಯಲ್ಲೇ ಸಂಜೆ ಸುರೇಶ ಅಂಗಡಿ ಅಂತ್ಯಕ್ರಿಯೆ: ಜಗದೀಶ್‌ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 4:17 IST
Last Updated 24 ಸೆಪ್ಟೆಂಬರ್ 2020, 4:17 IST
ಬುಧವಾರ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ‌ ನವದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು. ಸಚಿವ ಜಗದೀಶ ಶೆಟ್ಟರ್‌, ಸಂಸದರಾದ  ಶೋಭಾ ಕರಂದ್ಲಾಜೆ‌ ಹಾಗೂ ನಾರಾಯಣಸ್ವಾಮಿ ಅವರು ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅಂತಿಮ‌ ನಮನ ಸಲ್ಲಿಸಿದರು.
ಬುಧವಾರ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ‌ ನವದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು. ಸಚಿವ ಜಗದೀಶ ಶೆಟ್ಟರ್‌, ಸಂಸದರಾದ ಶೋಭಾ ಕರಂದ್ಲಾಜೆ‌ ಹಾಗೂ ನಾರಾಯಣಸ್ವಾಮಿ ಅವರು ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅಂತಿಮ‌ ನಮನ ಸಲ್ಲಿಸಿದರು.   

ನವದೆಹಲಿ: ಕೇಂದ್ರದ ಮಾರ್ಗದರ್ಶಿ ಪ್ರಕಾರ ನವದೆಹಲಿಯ ದ್ವಾರಕಾದಲ್ಲಿರುವ‌ ರುದ್ರಭೂಮಿಯಲ್ಲಿ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ನಾಲ್ಕು ಗಂಟೆ ವೇಳೆಗೆ‌ ನಡೆಯಲಿದೆ ಎಂದು ಸಚಿವ‌ ಜಗದೀಶ್ ಶೆಟ್ಟರ್ ತಿಳಿಸಿದರು.

ಅಂಗಡಿ ಅವರ ಒಬ್ಬ ಪುತ್ರಿ ಬೆಳಗಾವಿಯಿಂದ ನವದೆಹಲಿಗೆ ಬರಲಿದ್ದು, ಅವರು ಬಂದ ನಂತರ ‌ಅಂತ್ಯಕ್ರಿಯೆ‌ ನೆರವೇರಿಸಲಾಗುವುದು ಎಂದು ಅವರು ತಿಳಿಸಿದರು.

ಬೆಳಗಾವಿಯ ಕೆ.ಕೆ.‌ಕೊಪ್ಪ‌ಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ರಾಜ್ಯ ಸರ್ಕಾರದಿಂದ ಸಾಕಷ್ಟು ಪ್ರಯತ್ನ ಮಾಡಲಾಯಿತು. ಆದರೆ, ಕೇಂದ್ರ ಸರ್ಕಾರದ ಕೋವಿಡ್ ಮಾರ್ಗದರ್ಶಿ ಅನ್ವಯ ಪಾರ್ಥಿವ ಶರೀರವನ್ನು ಸಾಗಿಸುವುದು‌ ಅಸಾಧ್ಯವಾಗಿದೆ ಎಂದು ಅವರು ಹೇಳಿದರು.

ಪಾರ್ಥಿವ ಶರೀರ ಬೆಳಗಾವಿಗೆ ತರಲು ಕೋವಿಡ್ ಅಡ್ಡಿ

ADVERTISEMENT

ಬೆಳಗಾವಿ: ಕೋವಿಡ್‌ನಿಂದ ನವದೆಹಲಿಯ ಏಮ್ಸ್‌ ಅಸ್ಪತ್ರೆಯಲ್ಲಿ ಬುಧವಾರ ನಿಧನರಾದಸಂಸದ, ರೈಲ್ವೆ ಖಾತೆರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ.

ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಬೇಕು. ಇಲ್ಲೇ ಅಂತ್ಯಕ್ರಿಯೆ ನಡೆಸಬೇಕು ಎಂದು ಕುಟುಂಬದವರು ಹಾಗೂ ಅಭಿಮಾನಿಗಳ ಬಯಕೆಯಾಗಿತ್ತು. ಈ ನಿಟ್ಟಿನಲ್ಲಿ ಅಂಗಡಿ ಅವರ ಬೀಗರೂ ಆಗಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಪ್ರಯತ್ನ ಆರಂಭಿಸಿದ್ದರು.

ರಾಜ್ಯ ಸರ್ಕಾರದಿಂದಲೂ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಕೋವಿಡ್ ನಿಯಮಾವಳಿ ಪ್ರಕಾರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಅವಕಾಶ ಆಗುತ್ತಿಲ್ಲ ಎಂದು ತಿಳಿದುಬಂದಿದೆ.
ದೆಹಲಿಯ ದ್ವಾರಕಾ ಸೆಕ್ಟರ್ 24ರಲ್ಲಿ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.