ADVERTISEMENT

ಹೊಸ ತಲೆಮಾರಿಗೆ ಅವಕಾಶ ಸಿಗಬೇಕು: ನಾಯಕತ್ವ ಬದಲಾವಣೆಯ ಸುಳಿವು ನೀಡಿದ ಗೆಹಲೋತ್

ಪಿಟಿಐ
Published 25 ಸೆಪ್ಟೆಂಬರ್ 2022, 14:25 IST
Last Updated 25 ಸೆಪ್ಟೆಂಬರ್ 2022, 14:25 IST
ಅಶೋಕ್ ಗೆಹಲೋತ್
ಅಶೋಕ್ ಗೆಹಲೋತ್   

ಜೈಪುರ: ನಾನು 40 ವರ್ಷಗಳಿಂದ ಸಾಂವಿಧಾನಿಕ ಹುದ್ದೆಗಳನ್ನು ನಿರ್ವಹಿಸಿದ್ದು, ಹೊಸ ತಲೆಮಾರಿಗೆ ಅವಕಾಶ ಸಿಗಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಭಾನುವಾರ ಹೇಳಿದ್ದಾರೆ.

ಇದರೊಂದಿಗೆ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಸುಳಿವು ನೀಡಿದ್ದಾರೆ.

ಈ ಮುನ್ನ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಗೆಹಲೋತ್ ಸ್ಪಷ್ಟಪಡಿಸಿದ್ದರು. ಹಾಗಾಗಿ ರಾಜಸ್ಥಾನದಲ್ಲಿ ಮುಂದಿನ ಸಿಎಂ ಯಾರು ಆಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ADVERTISEMENT

ಜೈಸಲ್ಮೇರ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಗೆಹಲೋತ್, ನಾನು ಈ ಹಿಂದೆಯೂ ಹೇಳಿದಂತೆ ನನಗೆ ಯಾವುದೇ ಹುದ್ದೆ ಮುಖ್ಯವಲ್ಲ. ಕಳೆದ 50 ವರ್ಷಗಳಿಂದ ರಾಜಕೀಯ ರಂಗದಲ್ಲಿದ್ದೇನೆ. 40 ವರ್ಷಗಳಿಂದ ಸಾಂವಿಧಾನಿಕ ಹುದ್ದೆ ನಿರ್ವಹಿಸಿದ್ದೇನೆ. ನಾನು ಇನ್ನೇನು ಬಯಸಬಹುದು? ಹಾಗಾಗಿ ಹೊಸ ತಲೆಮಾರಿನ ನಾಯಕರಿಗೆ ಅವಕಾಶ ಸಿಗಬೇಕು ಎಂಬುದು ನನ್ನ ಮನಸ್ಸಿನಲ್ಲಿದೆ. ನಾವೆಲ್ಲರೂ ಒಗ್ಗಟ್ಟಾಗಿ ದೇಶಕ್ಕೆ ನಾಯಕತ್ವವನ್ನು ಒದಗಿಸಬೇಕು ಎಂದು ಹೇಳಿದರು.

ತಾವು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಬಯಸುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿರುವುದಾಗಿ ಗೆಹಲೋತ್ ತಿಳಿಸಿದರು.

ಮುಂಬರುವ ಚುನಾವಣೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕ ಎಂದು ಹೈಕಮಾಂಡ್‌ಗೆ ತಿಳಿಸಿದ್ದೇನೆ. ನಾನೇ ಆಗಲಿ ಅಥವಾ ಬೇರೆ ಯಾರೇ ಆಗಲೇ ಮುಂದಿನ ಚುನಾವಣೆಯಲ್ಲಿ ಗೆಲ್ಲೋ ಸಾಧ್ಯತೆ ಅಧಿಕವಿರುವ ನಾಯಕತ್ವದ ಅಡಿಯಲ್ಲಿ ಚುನಾವಣೆ ಎದುರಿಸುವಂತೆ ಸೂಚಿಸಿದ್ದೆ ಎಂದು ಹೇಳಿದರು.

ರಾಜಸ್ಥಾನ ಕಾಂಗ್ರೆಸ್ ಅಧಿಕಾರದಲ್ಲಿರುವ ಏಕೈಕ ದೊಡ್ಡ ರಾಜ್ಯವಾಗಿದೆ. ರಾಜಸ್ಥಾನದಲ್ಲಿ ಗೆದ್ದರೆ ಪಕ್ಷ ಪುನಶ್ಚೇತನಗೊಳ್ಳಲಿದ್ದು, ಇತರೆ ರಾಜ್ಯಗಳಲ್ಲೂ ಗೆಲ್ಲಲಿದೆ ಎಂದು ಹೇಳಿದರು.

ರಾಜಸ್ಥಾನದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.