ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಎನ್ಸಿಬಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪದ ತನಿಖೆಯ ವೇಳೆ ಕೇಳಿಬಂದಿರುವ ಸುನೀಲ್ ಪಾಟೀಲ್ ಅವರು ಎನ್ಸಿಪಿ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಬಿಜೆಪಿ ನಾಯಕ ಮೋಹಿತ್ ಭಾರತೀಯ ಆರೋಪಿಸಿದ್ದಾರೆ.
'ಈ ಸಂಪೂರ್ಣ ಪಿತೂರಿಯ ಮಾಸ್ಟರ್ ಮೈಂಡ್ ಸುನೀಲ್ ಪಾಟೀಲ್. ಪಾಟೀಲ್ ಕಳೆದ 20 ವರ್ಷಗಳಿಂದಲೂ ಎನ್ಸಿಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಮತ್ತು ಅವರ ಮಗ ಹೃಷಿಕೇಶ್ ಅವರ ಸ್ನೇಹಿತ. ಅವರು ವರ್ಗಾವಣೆ-ಪೋಸ್ಟಿಂಗ್ ದಂಧೆಗಳನ್ನು ನಡೆಸುತ್ತಿದ್ದರು' ಎಂದು ಪತ್ರಿಕಾಗೋಷ್ಠಿಯಲ್ಲಿ ಭಾರತಿಯ ಆರೋಪಿಸಿದರು.
ಸುನೀಲ್ ಪಾಟೀಲ್ ಅವರು ಸ್ಯಾಮ್ ಡಿಸೋಜಾ ಮತ್ತು ಕಿರಣ್ ಗೋಸಾವಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ದೂರಿದರು.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಎನ್ಸಿಪಿ ನಾಯಕನವಾಬ್ ಮಲಿಕ್, 'ಸಮೀರ್ ದಾವೂದ್ ವಾಂಖೆಡೆ ಅವರ ಖಾಸಗಿ ಸೇನೆಯ ಸದಸ್ಯರೊಬ್ಬರು ದಾರಿ ತಪ್ಪಿಸುವ ಮತ್ತು ಸತ್ಯವನ್ನು ಮರೆಮಾಚುವ ಉದ್ದೇಶದಿಂದ ಈಗಷ್ಟೆ ನಡೆಸಿದ ಪತ್ರಿಕಾಗೋಷ್ಠಿ ವಿಫಲವಾಗಿದೆ. ನಾನು ನಾಳೆ ಸತ್ಯವನ್ನು ಬಹಿರಂಗಪಡಿಸುತ್ತೇನೆ' ಎಂದು ಹೇಳಿದರು.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ಪದಾರ್ಥ ನಿಯಂತ್ರಣ ಬ್ಯೂರೊದ (ಎನ್ಸಿಬಿ) ಅಧಿಕಾರಿಗಳು ಬಾಲಿವುಡ್ ಸೂಪರ್ಸ್ಟಾರ್ ಶಾರುಕ್ ಖಾನ್ ಅವರಿಂದ ಆರೋಪಿಯಾದ ಅವರ ಮಗ ಆರ್ಯನ್ ಖಾನ್ ಬಿಡುಗಡೆಗೆ ₹25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪ್ರಕರಣದ ಸಾಕ್ಷಿಯಾಗಿರುವ ಪ್ರಭಾಕರ ಸೈಲ್ ಆರೋಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.