ಮುಂಬೈ: ಮುಂಬೈ ಸೆಂಟ್ರಲ್ ಮತ್ತು ಗುಜರಾತ್ನ ಗಾಂಧಿನಗರ ನಡುವಿನ ಮಾರ್ಗದಲ್ಲಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಹಾನಿಗೀಡಾಗಿದ್ದ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕೇವಲ 24 ಗಂಟೆಗಳಲ್ಲೇ ದುರಸ್ತಿ ಮಾಡಲಾಗಿದೆ. ಈ ಮಧ್ಯೆ, ಎಮ್ಮೆಗಳ ಮಾಲೀಕನ ವಿರುದ್ಧ ರೈಲ್ವೆ ಭದ್ರತಾ ದಳವು ಪ್ರಕರಣ ದಾಖಲಿಸಿದೆ.
ರೈಲಿನ ಮುಂಭಾಗವನ್ನು ಮುಂಬೈನಲ್ಲಿ ಬದಲಾಯಿಸಲಾಗಿದೆ ಎಂದು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಹೇಳಿಕೆಯಲ್ಲಿ ತಿಳಿಸಿದೆ.
‘ಅಪಘಾತವಾದಾಗ ಅದರ ತೀವ್ರತೆಯಿಂದಾಗಿ ಎಂಜಿನ್ ಮತ್ತು ಇತರೆ ಭಾಗಗಳಿಗೆ ಹಾನಿಯಾಗದಂತೆ ರೈಲಿನ ಮುಂಬದಿಯನ್ನು ರೂಪಿಸಲಾಗಿದೆ. ಅದು ರೀಪ್ಲೇಸಬಲ್ ಕೂಡ (ಬದಲಿಸಬಹುದಾದ ಭಾಗ). ಹೀಗಾಗಿಯೇ ಗುದ್ದಿದ ರಭಸಕ್ಕೆ ಮುಂಬಾಗ ಮುರಿದುಬಿದ್ದಿದೆ. ಅದನ್ನು ಈಗ ಬದಲಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಸೆಂಟ್ರಲ್-ಗಾಂಧಿನಗರ ನಡುವಿನ ಹೊಸ ವಂದೇ ಭಾರತ್ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್ ಬಳಿ ಗುರುವಾರ ಬೆಳಿಗ್ಗೆ 11.15 ರ ಸುಮಾರಿನಲ್ಲಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ನಾಲ್ಕು ಎಮ್ಮೆಗಳು ಮೃತಪಟ್ಟಿದ್ದರೆ, ರೈಲಿನ ಮುಂಬಾಗಕ್ಕೆ ಹಾನಿಯಾಗಿತ್ತು.
ಅಹಮದಾಬಾದ್ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ರೈಲು ಮಾರ್ಗದಲ್ಲಿ ಬಂದ ಎಮ್ಮೆಗಳ ಅಪರಿಚಿತ ಮಾಲೀಕನ ವಿರುದ್ಧ ರೈಲ್ವೆ ಭದ್ರತಾ ದಳ (ಆರ್ಪಿಎಫ್) ಎಫ್ಐಆರ್ ದಾಖಲಿಸಿದೆ ಎಂದು ಡಬ್ಲ್ಯುಆರ್ನ ಹಿರಿಯ ವಕ್ತಾರ ಜಿತೇಂದ್ರ ಕುಮಾರ್ ಜಯಂತ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.