
ಸಕ್ಕರೆ
ಪ್ರೇಮಿಗಳ ದಿನ: ಸಕ್ಕರೆಗೆ ರಿಯಾಯಿತಿ
ತಿರುವನಂತಪುರ: ಕೇರಳದ ಸರ್ಕಾರಿ ನಿಗಮವೊಂದು ಪ್ರೇಮಿಗಳ ದಿನದ ಅಂಗವಾಗಿ ರಿಯಾಯಿತಿ ದರದಲ್ಲಿ ಸಕ್ಕರೆಯನ್ನು ನೀಡಲಿದೆ.
ಕೇರಳ ನಾಗರಿಕ ಸರಬರಾಜು ನಿಗಮವು ತನ್ನ 50ನೇ ವರ್ಷಾಚರಣೆಯ ಪ್ರಯುಕ್ತ ಈ ರಿಯಾಯಿತಿ ಸೌಲಭ್ಯವನ್ನು ಘೋಷಿಸಿದೆ.
ನಿಗಮದ ಮಳಿಗೆಗಳಿಂದ ₹1 ಸಾವಿರ ಮೌಲ್ಯದ ಸಬ್ಸಿಡಿ ರಹಿತ ವಸ್ತುಗಳನ್ನು ಖರೀದಿಸುವವರಿಗೆ ₹14 ದರದಲ್ಲಿ ಒಂದು ಕೆ.ಜಿ ಸಕ್ಕರೆ ಸಿಗಲಿದೆ. ₹500 ಮೌಲ್ಯದ ವಸ್ತುಗಳ ಜೊತೆ 500 ಗ್ರಾಂ ಸಕ್ಕರೆ ದೊರಕಲಿದೆ. ಈ ರಿಯಾಯಿತಿ ಸೌಲಭ್ಯವು ಫೆಬ್ರುವರಿ 14ರಿಂದ 28ರವರೆಗೆ ಜಾರಿಯಲ್ಲಿರಲಿದೆ.
ಜನರನ್ನು ಸೆಳೆಯಲು ಈ ರಿಯಾಯಿತಿ ನೀಡಲಾಗಿದೆ.
****
ಬೆಳಿಗ್ಗೆ ಬಂಧನ; ಮಧ್ಯಾಹ್ನ ಬಿಡುಗಡೆ
ಕಾನ್ಪುರ: ಲ್ಯಾಂಬೋರ್ಗಿನಿ ಕಾರು ಸರಣಿ ಅಪಘಾತ ಪ್ರಕರಣದಲ್ಲಿ ಗುರುವಾರ ಬೆಳಿಗ್ಗೆ ಕಾನ್ಪುರ ಪೊಲೀಸರಿಂದ ಬಂಧಿತನಾಗಿದ್ದ ತಂಬಾಕು ಉದ್ಯಮಿಯ ಪುತ್ರ ಶಿವಂ ಮಿಶ್ರಾ ಮಧ್ಯಾಹ್ನದ ವೇಳೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಉದ್ಯಮಿ ಕೆ.ಕೆ.ಮಿಶ್ರಾ ಅವರ ಪುತ್ರ 35 ವರ್ಷದ ಶಿವಂ ಮಿಶ್ರಾನನ್ನು ಕಾನ್ಪುರ ಪೊಲೀಸರು ಬಂಧಿಸಿ ಗುರುವಾರ ಬೆಳಗ್ಗೆ ಎಸಿಜೆಎಂ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.
ಪೊಲೀಸರು ವಿಚಾರಣೆಗಾಗಿ ವಶಕ್ಕೆ ಕೋರಿದ್ದರು. ಆದರೆ ವಶಕ್ಕೆ ನೀಡುವ ಅಗತ್ಯ ಏನಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು. ವಾದ–ಪ್ರತಿವಾದ ಆಲಿಸಿ ₹20 ಸಾವಿರದ ಗ್ಯಾರಂಟಿ ಪತ್ರದೊಂದಿಗೆ ಜಾಮೀನು ಮಂಜೂರು ಮಾಡಿತು ಎಂದು ಸರ್ಕಾರಿ ಅಭಿಯೋಜಕ ದಿಲೀಪ್ ಅಶ್ವತಿ ತಿಳಿಸಿದ್ದಾರೆ.
****
ಸೇವಾ ತೀರ್ಥ, ಕರ್ತವ್ಯ ಭವನ ಉದ್ಘಾಟನೆ ಇಂದು
ನವದೆಹಲಿ: ಸುಮಾರು 126 ವರ್ಷಗಳ ಇತಿಹಾಸವಿದ್ದ ಬ್ರಿಟಿಷ್ ಕಾಲದ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದ್ದ ಸಂಸತ್ ಕಾರ್ಯಾಲಯವು ಇತಿಹಾಸದ ಪುಟ ಸೇರಲಿದೆ. ಪ್ರಧಾನ ಮಂತ್ರಿ ಕಚೇರಿಯೂ ಸೇರಿ ಹಲವು ಸಚಿವಾಲಯಗಳ ಕಚೇರಿಯು ಈಗ ಸೇವಾ ತೀರ್ಥ ಮತ್ತು ಕರ್ತವ್ಯ ಭವನಕ್ಕೆ ಸ್ಥಳಾಂತರಗೊಳ್ಳಲಿವೆ.
ಪ್ರಧಾನಿ ಕಚೇರಿ ಒಳಗೊಂಡ ‘ಸೇವಾ ತೀರ್ಥ’ ಮತ್ತು ವಿವಿಧ ಸಚಿವಾಲಯಗಳ ಕಚೇರಿಗಳಿರುವ ಕರ್ತವ್ಯ ಭವನ 1 ಮತ್ತು 2 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ.
ತಮ್ಮ ಕಚೇರಿಯಲ್ಲಿ ಶುಕ್ರವಾರದಂದು ಪ್ರಧಾನಿ ಮೋದಿ ಅವರು ಕೊನೇ ಸಂಪುಟ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ಕಚೇರಿಯ ಸ್ಥಳಾಂತರ ಕಾರ್ಯ ಆರಂಭಗೊಳ್ಳಲಿವೆ. ‘ಯುಗೇ ಯುಗೀನ್ ಭಾರತ್ ನ್ಯಾಷನಲ್ ಮ್ಯೂಸಿಯಂ’ ಯೋಜನೆಯ ಭಾಗವಾಗಿ ಹಳೇ ಕಟ್ಟಡಗಳನ್ನೂ ಮ್ಯೂಸಿಯಂ ಆಗಿ ಪರಿವರ್ತಿ
ಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.