ADVERTISEMENT

ಡಿ.31ರೊಳಗೆ ಅಧಿಸೂಚನೆ: ಎನ್‌ಜಿಟಿ ಸೂಚನೆ

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 18:22 IST
Last Updated 2 ಅಕ್ಟೋಬರ್ 2020, 18:22 IST
ಪಶ್ಚಿಮಘಟ್ಟ (ಸಂಗ್ರಹ ಚಿತ್ರ)
ಪಶ್ಚಿಮಘಟ್ಟ (ಸಂಗ್ರಹ ಚಿತ್ರ)   

ನವದೆಹಲಿ: ಪಶ್ಚಿಮ ಘಟ್ಟದಲ್ಲಿನ ಪರಿಸರ ಸೂಕ್ಷ್ಮ ವಲಯ ಕುರಿತು ಡಿಸೆಂಬರ್ 31ರೊಳಗೆ ಅಧಿಸೂಚನೆ ಹೊರಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ಅಲ್ಲದೆ, ಈ ಸಂಬಂಧ ಮತ್ತಷ್ಟು ವಿಳಂಬ ತೋರಿದಲ್ಲಿ ಯಾವುದೇ ರೀತಿಯ ಸಮರ್ಥನೆಗೆ ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಹಸಿರು ಪೀಠ ತಿಳಿಸಿದೆ.

ಅಧಿಸೂಚನೆ ಅಂತಿಮಗೊಳಿಸುವಂತೆ ಸೂಚಿಸಲಾದ ಅಗತ್ಯ ಆದೇಶವನ್ನು ಪಾಲಿಸಬೇಕು. ಒಂದೊಮ್ಮೆ, ವಿಳಂಬ ಕಂಡುಬಂದಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯದ ಪರಿಸರ ಸೂಕ್ಷ್ಮ ವಲಯ ವಿಭಾಗದ ಸಲಹೆಗಾರರ ವೇತನ ತಡೆ ಹಿಡಿಯಲು ನಿರ್ದೇಶನ ನೀಡುವುದು ಅನಿವಾರ್ಯವಾಗಲಿದೆ ಎಂದು ಪೀಠವು ಎಚ್ಚರಿಕೆ ನೀಡಿದೆ.

ADVERTISEMENT

ಪ್ರಕರಣದ ವಿಚಾರಣೆಯನ್ನು ನಿಗದಿಗೊಳಿಸಿರುವ ಮುಂದಿನ ದಿನಾಂಕಕ್ಕೆ ಮೊದಲೇ ಈ ಕುರಿತ ಅನುಸರಣಾ ವರದಿಯನ್ನು ನ್ಯಾಯಮಂಡಳಿಗೆ ಇ–ಮೇಲ್ ಮೂಲಕ ಸಲ್ಲಿಸಬೇಕು ಎಂದೂ ನ್ಯಾಯಪೀಠ ಸೂಚಿಸಿದೆ.

ಎಂಟು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಲೇ ಇರುವುದರಿಂದ ಅಭಿವೃದ್ಧಿಯ ಅಗತ್ಯವನ್ನು ಪ್ರತಿಪಾದಿಸುವ ರಾಜ್ಯ ಸರ್ಕಾರಗಳು ಪಶ್ಚಿಮ ಘಟ್ಟದಲ್ಲಿನ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಹೊರಗಿಡುವಂತೆ ಬೇಡಿಕೆ ಸಲ್ಲಿಸುತ್ತಿವೆ. ಆದರೆ, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅಂತಹ ಬೇಡಿಕೆಗಳಿಗೆ ಅವಕಾಶ ದೊರೆಯದಂತೆ ಅಧಿಸೂಚನೆಯನ್ನು ಅಂತಿಮಗೊಳಿಸಬೇಕು ಎಂದು ಪೀಠ ಒತ್ತಿ ಹೇಳಿದೆ.

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯವು ತೀವ್ರ ಅಪಾಯದಲ್ಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮಂಡಳಿಯು, ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಭಿವೃದ್ಧಿ ಚಟುವಟಿಕೆಗಳಿಗೆ ಅನುಮತಿ ನೀಡದಂತೆ ಘಟ್ಟದ ವ್ಯಾಪ್ತಿಯ ಕರ್ನಾಟಕ ಗುಜರಾತ್‌, ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮೇಲೆ ನಿರ್ಬಂಧ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.