ADVERTISEMENT

ಅಕ್ರಮ ಶಸ್ತ್ರಾಸ್ತ್ರ, ಮಾದಕ ವಸ್ತು ಕಳ್ಳಸಾಗಣೆಏಳು ಸ್ಥಳಗಳಲ್ಲಿ ಎನ್‌ಐಎ ಶೋಧ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 12:43 IST
Last Updated 14 ಆಗಸ್ಟ್ 2021, 12:43 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಚೆನ್ನೈ(ಪಿಟಿಐ) ಇರಾನ್ ಮತ್ತು ಪಾಕಿಸ್ತಾನದಿಂದ ಶ್ರೀಲಂಕಾಕ್ಕೆ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿರುವವರ ನಿವಾಸಗಳನ್ನು ಗುರಿಯಾಗಿಸಿಕೊಂಡು ತಮಿಳುನಾಡು ಮತ್ತು ಕೇರಳದ ಏಳು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಶೋಧ ನಡೆಸಿದೆ.

ತಮಿಳುನಾಡಿನ ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆಗಳು ಮತ್ತು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಶೋಧ ನಡೆಸಲಾಗಿದೆ ಎಂದು ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಶೋಧದ ವೇಳೆ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಟಿಟಿಇ(ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಮ್) ಗೆ ಸಂಬಂಧಿಸಿದ ಪುಸ್ತಕಗಳು, ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಸೇರಿ ಏಳು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಅಧಿಕಾರಿ ಹೇಳಿದರು.

ADVERTISEMENT

ಇದೇ ವರ್ಷದ ಮಾರ್ಚ್ 18ರಂದು ಅರಬ್ಬಿ ಸಮುದ್ರದಲ್ಲಿ ವಿಜಿಂಜಮ್ ಬಳಿ ಕರಾವಳಿ ರಕ್ಷಣಾ ಪಡೆ ಗಸ್ತು ತಿರುಗುತ್ತಿದ್ದಾಗ, ಶ್ರೀಲಂಕಾಕ್ಕೆ ಸೇರಿದ ದೋಣಿಯಲ್ಲಿ ಸಾಗಿಸುತ್ತಿದ್ದ 300 ಕೆ.ಜಿ ಹೆರಾಯಿನ್, 5 ಎಕೆ -47 ರೈಫಲ್‌ಗಳು ಮತ್ತು 1 ಸಾವಿರ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು, ಆರು ಮಂದಿ ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿ‌ತ್ತು. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಏಪ್ರಿಲ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮೇನಲ್ಲಿ ಪ್ರಕರಣವನ್ನು ಮರು ದಾಖಲಿಸಿಕೊಂಡು ತನಿಖೆ ಆರಂಭಿಸಿದಎನ್‌ಐಎ, ಸುರೇಶ್ ಮತ್ತು ಸೌಂದರ್ಯರಾಜನ್‌ ಎಂಬ ಇಬ್ಬರು ಆರೋಪಿಗಳನ್ನು ಆಗಸ್ಟ್ 2ರಂದು ಬಂಧಿಸಿತ್ತು.

ಶಂಕಿತ ಆರೋಪಿಗಳು ಇರಾನ್ ಮತ್ತು ಪಾಕಿಸ್ತಾನದಿಂದ ಶ್ರೀಲಂಕಾಗೆ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದರು ಎಂದು ಎನ್ಐಎ ಅಧಿಕಾರಿ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ, ಕರಾವಳಿ ಗಸ್ತು ಪಡೆ ಅಂದಾಜು ₹4,900 ಕೋಟಿ ಮೌಲ್ಯದ ಸುಮಾರು 1.6 ಟನ್ ಮಾದಕ ದ್ರವ್ಯ ವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.