ನವದೆಹಲಿ: ಶಸ್ತ್ರಾಸ್ತ್ರಗಳ ಬಳಕೆ, ಸುಲಿಗೆ ಹಾಗೂ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯರಿಗೆ ಆಶ್ರಯ ನೀಡಿದ್ದ ಪ್ರಕರಣದಲ್ಲಿ ಸಿಪಿಐ (ಮಾವೋವಾದಿ) ಕಾರ್ಯಕರ್ತನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಗುರುವಾರ ಆರೋಪಪಟ್ಟಿ ಸಲ್ಲಿಸಿದೆ.
ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ರಾಜೇಶ್ ಡಿಯೋಗಮ್ ವಿರುದ್ಧ ಐಪಿಸಿ, ಶಸ್ತ್ರಾಸ್ತ್ರಗಳ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಎನ್ಐಎ ರಾಂಚಿಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದನಾ ಕೃತ್ಯಗಳನ್ನು ಎಸಗಲು, ಸಭೆಗಳನ್ನು ಆಯೋಜಿಸಲು ಹಾಗೂ ವ್ಯಾಪಾರಿಗಳು, ಗುತ್ತಿಗೆದಾರರಿಂದ ಹಣ ಸುಲಿಗೆ ಮಾಡುವ ನಿಷೇಧಿತ ಸಂಘಟನೆಯನ್ನು ರಾಜೇಶ್ ಬೆಂಬಲಿಸುತ್ತಿದ್ದ ಸಂಗತಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ.
2024ರ ಮಾರ್ಚ್ನಲ್ಲಿ ಸಿಪಿಐ (ಮಾವೋವಾದಿ) ಸದಸ್ಯ ಮಿಸಿರ್ ಬೆಸ್ರಾ ಅವರಿಗೆ ಸೇರಿದ ಅಪಾರ ಪ್ರಮಾಣದ ಹಣ ಹಾಗೂ ಅಪರಾಧ ಕೃತ್ಯಕ್ಕೆ ಬಳಸುವ ವಸ್ತುಗಳ ಪತ್ತೆ ಸಂಬಂಧ ಸ್ಥಳೀಯ ಪೊಲೀಸರು ಐವರ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲೂ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.