ಮುಂಬೈ: ಐಎಸ್ ಉಗ್ರ ಸಂಘಟನೆಯಿಂದ ಪ್ರಚೋದಿತರಾಗಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಆರೋಪದಲ್ಲಿ ಎಂಟು ವ್ಯಕ್ತಿಗಳು ಹಾಗೂ ಒಬ್ಬ ಬಾಲಕನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಶಕ್ಕೆ ಪಡೆದಿದೆ.
ಠಾಣೆ ಹಾಗೂ ಔರಾಂಗಾಬಾದ್ನಲ್ಲಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.
ಶಂಕಿತರು ವಿಧ್ವಂಸಕ ಕೃತ್ಯ ಎಸಗುವ ಮುನ್ನ ಅವರ ಯೋಜನೆಯನ್ನು ವಿಫಲಗೊಳಿಸಿ, ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಲವು ವಾರಗಳಿಂದ ಶಂಕಿತರ ಮೇಲೆ ನಿಗಾ ಇಟ್ಟಿದ್ದ ಎಟಿಎಸ್, ಖಚಿತ ಮಾಹಿತಿ ಆಧರಿಸಿ ಅವರನ್ನು ಬಂಧಿಸಿತು.
ಠಾಣೆಯ ಅಮೃತ್ ನಗರ, ಕೌಸಾ, ಮೋತಿ ಬಾಗ್ ಅಲ್ಮಾಸ್ ಕಾಲೊನಿಯಲ್ಲಿ ಹಾಗೂ ಔರಂಗಾಬಾದ್ನ ಕೈಸರ್ ಕಾಲೊನಿ, ರೋಹತ್ ಕಾಲೊನಿ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾವಿನವರೆಗೂ ಶೋಧ ನಡೆಸಲಾಗಿತ್ತು.
ಈ ವೇಳೆ ಕೆಲವು ರಾಸಾಯನಿಕಗಳು, ಆ್ಯಸಿಡ್ ಬಾಟಲಿ, ಚೂಪಾದ ಆಯುಧ, ಮೊಬೈಲ್ ಫೋನ್, ಹಾರ್ಡ್ಡಿಸ್ಕ್ ಮತ್ತು ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.