ನವದೆಹಲಿ:ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಯುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಅವರಿಗಿನ್ನೂ ಕಾನೂನು ಹೋರಾಟದ ಆಯ್ಕೆಗಳಿವೆ ಎಂದು ಅವರಪರ ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.
‘ಕ್ಯುರೇಟಿವ್ ಪರಿಶೀಲನಾ ಅರ್ಜಿ’ಯೂ ಸೇರಿದಂತೆ ಹಲವು ಆಯ್ಕೆಗಳು ಅಪರಾಧಿಗಳ ಮುಂದಿವೆ. ಇವೆಲ್ಲ ಕೊನೆಗೊಂಡ ಬಳಿಕವಷ್ಟೇ ಗಲ್ಲು ಶಿಕ್ಷೆ ಜಾರಿಗೊಳಿಸಲು ಸಾಧ್ಯ ಎಂದು ವಕೀಲರು ತಿಳಿಸಿದ್ದಾರೆ.
ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದ್ದ ಕ್ಷಮಾದಾನ ಅರ್ಜಿಯನ್ನು ಅಪರಾಧಿ ವಿನಯ್ ಶರ್ಮಾ ಹಿಂಪಡೆದಿದ್ದಾನೆ. ಕಾನೂನು ಆಯ್ಕೆಗಳಿರುವಾಗ ಸರ್ಕಾರ ಅಥವಾ ಜೈಲು ಅಧಿಕಾರಿಗಳು ತರಾತುರಿಯಲ್ಲಿ ಮರಣದಂಡನೆ ಜಾರಿಗೊಳಿಸಲು ಯತ್ನಿಸುವುದು ಎಷ್ಟು ಸರಿ? ಕಾನೂನು ಎಲ್ಲರಿಗೂ ಒಂದೇ ಎಂದುಸಿಂಗ್ ಹೇಳಿದ್ದಾರೆ.
ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಡಿ.17) ವಿಚಾರಣೆ ನಡೆಸಲಿದೆ. ಹೀಗಾಗಿ ಅದಕ್ಕೂ ಮುನ್ನ ಗಲ್ಲು ಶಿಕ್ಷೆ ಜಾರಿಯಾಗದು ಎಂದು ನಿರ್ಭಯಾ ಪೋಷಕರ ಪರ ವಕೀಲ ಜಿತೇಂದ್ರ ಕುಮಾರ್ ಹೇಳಿದ್ದಾರೆ. ಈ ಕಾನೂನು ಕ್ರಮಗಳು ಅಪರಾಧಿಗಳ ಗಲ್ಲು ಶಿಕ್ಷೆಯನ್ನು ವಿಳಂಬ ಮಾಡುವ ತಂತ್ರಗಳು ಎಂದೂ ಅವರು ಹೇಳಿದ್ದಾರೆ.
ಮಂಡೋಲಿ ಜೈಲಿನಲ್ಲಿದ್ದ ಅಪರಾಧಿ ಪವನ್ ಕುಮಾರ್ ಗುಪ್ತ ಎಂಬುವನನ್ನು ತಿಹಾರ್ ಜೈಲಿಗೆ ಮಂಗಳವಾರ ಸ್ಥಳಾಂತರಿಸಲಾಗಿತ್ತು. ಇದು,ಅಪರಾಧಿಗಳನ್ನು ನೇಣಿಗೆ ಹಾಕುವ ಸಿದ್ಧತೆ ನಡೆಯುತ್ತಿದೆ ಎಂಬ ವದಂತಿಗಳಿಗೆ ಪುಷ್ಟಿ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.