ADVERTISEMENT

ಹಕ್ಕು ಕೇಳಿದ ನಿರ್ಭಯಾ ತಾಯಿ: ನಾನು ಕಾನೂನು ಅನುಸರಿಸಲೇ ಬೇಕು ಎಂದ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 12:22 IST
Last Updated 18 ಡಿಸೆಂಬರ್ 2019, 12:22 IST
   

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿದ್ದ ಸಂದರ್ಭ ಇಂದು ಸಂಜೆ ಪಟಿಯಾಲ ಹೌಸ್‌ ನ್ಯಾಯಾಲಯದಲ್ಲಿ ಹಲವು ಮನಕಲಕುವ ಘಟನೆಗಳು ನಡೆದವುಎಂದು ಎನ್‌ಡಿಟಿವಿ ವರದಿ ಮಾಡಿದೆ.

ಅತ್ಯಾಚಾರಿಗಳ ಮರಣ ದಂಡನೆ ಮುಂದೂಡಲಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ ತಕ್ಷಣ ನಿರ್ಭಯಾ ತಾಯಿ ಆಶಾ ದೇವಿ ನ್ಯಾಯಾಲಯದಲ್ಲೇ ಕುಸಿದು ಬಿದ್ದು ಅಳಲು ಆರಂಭಿಸಿದ್ದಾರೆ. ‘ನ್ಯಾಯ ಹುಡುಕಿಕೊಂಡು ಏಳು ವರ್ಷಗಳ ಕಾಲ ಅಲೆದಿದ್ದೇವೆ. ನಾವು ಎಲ್ಲಿಗೆ ಹೋದರೂ, ಅಪರಾಧಿಗಳ ಹಕ್ಕುಗಳ ಬಗ್ಗೆ ಹೇಳಲಾಗುತ್ತದೆ. ನಮ್ಮ ಹಕ್ಕಗಳಬಗ್ಗೆ ಕೇಳುವವರಾರು?’ ಎಂದು ಪ್ರಶ್ನಿಸುತ್ತ ನ್ಯಾಯಮೂರ್ತಿಗಳ ಮುಂದೆ ನೋವು ತೋಡಿಕೊಂಡಿದ್ದಾರೆ.

ಕಣ್ಣಿರು ಹಾಕುತ್ತಿದ್ದ ಆಶಾದೇವಿಯರನ್ನು ಸಮಾಧಾನ ಪಡಿಸಲು ಮುಂದಾದ ನ್ಯಾಯಮೂರ್ತಿಗಳು, ‘ನನಗೂ ಸಹಾನುಭೂತಿ ಇದೆ. ಆದರೆ, ನಾನು ಕಾನೂನನ್ನು ಅನುಸರಿಸಲೇ ಬೇಕು. ನಾಲ್ವರು ಅಪರಾಧಿಗಳ ಮರಣದಂಡನೆಗೆ ಹೊಸ ನೋಟಿಸ್ ಜಾರಿ ಮಾಡುವ ಅನಿವಾರ್ಯತೆ ನನಗಿದೆ’ ಎಂದು ಅಸಹಾಯಕ ಧ್ವನಿಯಲ್ಲಿ ತಿಳಿಹೇಳಲು ಪ್ರಯತ್ನಿಸಿದ್ದಾರೆ.

ADVERTISEMENT

ವಿಚಾರಣೆ ಮುಗಿದ ನಂತರ ನಿರ್ಭಯಾ ತಾಯಿ ಆಶಾದೇವಿ ಅವರು ನ್ಯಾಯಲಯದಿಂದ ಹೊರಬಂದು ಮತ್ತೊಮ್ಮೆ ಕಣ್ಣಿರು ಹಾಕುವ ಮೂಲಕ ನೋವು ಹಂಚಿಕೊಂಡಿದ್ದಾರೆ. ‘ನಿರ್ಭಯಾ ತಂದೆ–ತಾಯಿಗಳು ಯಾವುದೇ ಹಕ್ಕು ಹೊಂದಿಲ್ಲ’ ಎಂದು ಆ ಸಂದರ್ಭದಲ್ಲಿ ಹೇಳಿದ್ದಾರೆ.

ಈ ಘಟನೆ ನಡೆಯುದಕ್ಕೆ ಕೆಲ ಗಂಟೆಗಳ ಮುನ್ನ ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿ ಅಕ್ಷಯ್‌ ಕುಮಾರ್ ಸಿಂಗ್‌ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದ್ದನ್ನು ಇಲ್ಲಿ ಗಮನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.