ADVERTISEMENT

‘ಫೀನಿಕ್ಸ್‌’ನಂತೆ ಮತ್ತೆ ಮೇಲೆದ್ದ 'ಸುಶಾಸನ ಬಾಬು' ನಿತೀಶ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 14:20 IST
Last Updated 14 ನವೆಂಬರ್ 2025, 14:20 IST
<div class="paragraphs"><p>ನಿತೀಶ್‌ ಕುಮಾರ್</p></div>

ನಿತೀಶ್‌ ಕುಮಾರ್

   

ಪಟ್ನಾ: ಜೆಡಿಯು ವರಿಷ್ಠ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರಸಕ್ತ ಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಜಯತಂದುಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಬಿಹಾರದ ರಾಜಕಾರಣದಲ್ಲಿ ವಿರೋಧಿಗಳು ಹಾಗೂ ಮಾಧ್ಯಮದವರು ಅವರನ್ನು ‘ಪಲ್ಟು ರಾಮ್‌’ ಎಂದೇ ಲೇವಡಿ ಮಾಡುತ್ತಾರೆ. ತಾನು, ಬೂದಿಯಿಂದ ಎದ್ದುಬರುವ ‘ಫೀನಿಕ್ಸ್‌’ ಪಕ್ಷಿಯಂತೆ ಎಂಬ ಸಂದೇಶವನ್ನು ನಿತೀಶ್‌ ರವಾನಿಸಿದ್ದಾರೆ.

ADVERTISEMENT

ಅವರಿಗೆ ಮುಂದಿನ ವರ್ಷ ಮಾರ್ಚ್‌ 1ಕ್ಕೆ 75 ವರ್ಷ ತುಂಬಲಿದೆ. ಈ ಚುನಾವಣೆಯಲ್ಲಿ ಅವರ ಪಕ್ಷ ಜೆಡಿಯು ಅಧಿಕ ಸ್ಥಾನ ಗೆದ್ದಿರುವುದು ಗಮನಾರ್ಹ.

ದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿರುವ ಹೆಗ್ಗಳಿಕೆ ಹೊಂದಿರುವ ಅವರನ್ನು ಬೆಂಬಲಿಗರು ‘ಸುಶಾಸನ ಬಾಬು’ (ಉತ್ತಮ ಆಡಳಿತಗಾರ) ಎಂದು ಕರೆಯುತ್ತಾರೆ. ಕಾನೂನು ಮತ್ತು ಸುವ್ಯವಸ್ಥೆ ಇಲ್ಲದ ಬಿಹಾರವನ್ನು ಅಭಿವೃದ್ಧಿಯ ಹಳಿಗೆ ತಂದ ಶ್ರೇಯಸ್ಸು ನಿತೀಶ್‌ ಕುಮಾರ್‌ ಅವರಿಗೆ ಸಲ್ಲುತ್ತದೆ.

ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವೀಧರರಾಗಿರುವ ನಿತೀಶ್‌ ಕುಮಾರ್‌ ಸವೆಸಿದ ರಾಜಕೀಯ ದಾರಿ ಸುಗಮವಾಗೇನೂ ಇಲ್ಲ. ತುರ್ತು ಪರಿಸ್ಥಿತಿ ಬಳಿಕ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರೋಧಿ ಅಲೆ ಇತ್ತು. ತಮ್ಮ ಸಮಾಜವಾದಿ ಗೆಳೆಯರಾದ ಲಾಲು ಪ್ರಸಾದ್‌, ರಾಮವಿಲಾಸ್‌ ಪಾಸ್ವಾನ್‌ ಗೆದ್ದು ಬಂದರೂ, ನಿತೀಶ್‌ ಪರಾಭವಗೊಂಡಿದ್ದರು.

ಇಂದಿರಾ ಗಾಂಧಿ ಹತ್ಯೆ ನಂತರ 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ, ನಿತೀಶ್‌ ಅವರು ಮೊದಲ ಬಾರಿಗೆ ಗೆದ್ದು ಬಿಹಾರ ವಿಧಾನಸಭೆ ಪ್ರವೇಶಿಸಿದರು. ಅಂದಿನಿಂದಲೂ, ರಾಜಕೀಯವಾಗಿ ತುಳಿಯಲು ಅವರ ವಿರೋಧಿಗಳು ಯತ್ನಿಸಿದಾಗಲೆಲ್ಲಾ ನಿತೀಶ್‌ ಪುಟಿದೆದ್ದು ಬಂದಿದ್ದಾರೆ.

‘ದಣಿದಿಲ್ಲ..ನಿವೃತ್ತಿಯ ಮನಸ್ಸೂ ಇಲ್ಲ..’

ಮತ ಎಣಿಕೆ ಮುನ್ನಾ ದಿನವಾದ ಗುರುವಾರ, ಪಟ್ನಾದಲ್ಲಿರುವ ಜೆಡಿಯು ಕಚೇರಿ ಮುಂದೆ ‘ಟೈಗರ್‌ ಅಭಿ ಜಿಂದಾ ಹೈ’(ಹುಲಿ ಇನ್ನೂ ಜೀವಂತ ಇದೆ) ಎಂಬ ಪೋಸ್ಟರ್‌ಗಳನ್ನು ಜೆಡಿಯು ಕಾರ್ಯಕರ್ಯರು ಅಳವಡಿಸಿದ್ದರು. ಆ ಮೂಲಕ, ನಿತೀಶ್‌ ಕುಮಾರ್‌ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿ ಏರಲಿದ್ದಾರೆ ಎಂಬ ಸಂದೇಶ ರವಾನಿಸಿದ್ದರು.

ಫಲಿತಾಂಶ ಹೊರಬಿದ್ದಿದ್ದು, ಜೆಡಿಯು ಒಳಗೊಂಡು ಎನ್‌ಡಿಎ ಅಭೂತಪೂರ್ವ ಜಯಗಳಿಸಿದೆ. ಹೀಗಾಗಿ, ‘ಟೈಗರ್‌ ಅಭಿ ಜಿಂದಾ ಹೈ’ ಎಂಬ ಬಾಲಿವುಡ್‌ ಚಿತ್ರದ ಹೆಸರು, ‘ತಾನು ದಣಿದಿಲ್ಲ ಹಾಗೂ ನಿವೃತ್ತಿ ಹೊಂದುವ ಮನಸ್ಸೂ ಮಾಡಿಲ್ಲ’ ಎಂಬ ನಿತೀಶ್‌ ಕುಮಾರ್ ನಿಲುವನ್ನು ಹೇಳುತ್ತದೆ ಎಂದು ವಿಶ್ಲೇಷಿಲಾಗುತ್ತಿದೆ.

ಚುನಾವಣೆಗೂ ಮುನ್ನ ನಿತೀಶ್‌ ಕುಮಾರ್‌ ಘೋಷಿಸಿದ್ದ ಹಲವು ಕೊಡುಗೆಗಳ ಬಗ್ಗೆ ವಿಪಕ್ಷಗಳು ಟೀಕೆ ಮಾಡಿದ್ದವು. ತಮ್ಮದೇ ಕಾರ್ಯಕ್ರಮಗಳನ್ನು ನಿತೀಶ್‌ ನಕಲು ಮಾಡುತ್ತಿದ್ದಾರೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದರೆ, ‘ನಿತೀಶ್‌ ಕುಮಾರ್‌ ಮತದಾರರಿಗೆ ಲಂಚ ನೀಡುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು’ ಎಂದು ಜನ ಸುರಾಜ್‌ ಪಕ್ಷದ ನಾಯಕ ಪವನ್‌ ವರ್ಮಾ ಆಗ್ರಹಿಸಿದ್ದರು.

ಈ ಟೀಕೆಗಳಿಂದ ಧೃತಿಗೆಡದ ನಿತೀಶ್‌ ಕುಮಾರ್‌ ಬಿರುಸಿನ ಪ್ರಚಾರ ನಡೆಸಿ, ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.