ADVERTISEMENT

ಬಿಹಾರ: ದಲಿತ ನಾಯಕ ಡಿಸಿಎಂ?

ರಾಜ್ಯಪಾಲರ ಭೇಟಿಯಾದ ನಿತೀಶ್‌

ಪಿಟಿಐ
Published 13 ನವೆಂಬರ್ 2020, 19:07 IST
Last Updated 13 ನವೆಂಬರ್ 2020, 19:07 IST
ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹಾಗೂ ಇತರೆ ಸಚಿವರು
ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹಾಗೂ ಇತರೆ ಸಚಿವರು   

ಪಟ್ನಾ: ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರು ಶುಕ್ರವಾರ ಸಂಜೆ ರಾಜೀನಾಮೆ ಸಲ್ಲಿಸಿ ದ್ದಾರೆ. ತಮ್ಮ ಸಚಿವ ಸಂಪುಟದ ರಾಜೀನಾಮೆ ಮತ್ತು ವಿಧಾನಸಭೆ ವಿಸರ್ಜನೆಯ ಶಿಫಾರಸನ್ನು ಅವರು ರಾಜ್ಯಪಾಲ ಫಗು ಚೌಹಾಣ್‌ ಅವರಿಗೆ ಸಲ್ಲಿಸಿದ್ದಾರೆ.

ಎನ್‌ಡಿಎಯ ಎಲ್ಲ ಪಕ್ಷಗಳಿಗೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ) ಅಥವಾ ದಲಿತ ಸಮುದಾಯದವರೊಬ್ಬರನ್ನು ಉಪಮುಖ್ಯಮಂತ್ರಿ (ಡಿಸಿಎಂ) ಮಾಡುವ ಬಗ್ಗೆ ಬಿಜೆಪಿ ಚಿಂತಿಸುತ್ತಿದೆ ಎನ್ನಲಾಗಿದೆ. ಈವರೆಗೆ ಉಪಮುಖ್ಯಮಂತ್ರಿ ಆಗಿದ್ದ ಸುಶೀಲ್‌ ಕುಮಾರ್‌ ಮೋದಿ ಅವರ ಸ್ಥಾನಕ್ಕೆ ಬೇರೊಬ್ಬರೇ ಅಥವಾ ಇಬ್ಬರಿಗೆ ಸ್ಥಾನ ನೀಡಲಾಗುವುದೇ ಎಂಬುದು ಸ್ಪಷ್ಟವಾಗಿಲ್ಲ.

ಉಪಮುಖ್ಯಮಂತ್ರಿ ಹುದ್ದೆಗೆ ಪರಿಶಿಷ್ಟ ಜಾತಿಯ ನಾಯಕ ಕಾಮೇಶ್ವರ ಚೌಪಾಲ್‌ ಅವರ ಹೆಸರು ಕೇಳಿ ಬರುತ್ತಿದೆ. ಸುದೀರ್ಘ ಕಾಲದಿಂದ ಅವರು ಆರ್‌ಎಸ್‌ಎಸ್‌ನಲ್ಲಿ ಇದ್ದಾರೆ. 1990ರ ದಶಕದಲ್ಲಿ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶಿಲಾನ್ಯಾಸ ಮಾಡಲು ಅವರನ್ನು ಆಯ್ಕೆ ಮಾಡಲಾಗಿತ್ತು.

ADVERTISEMENT

ವಿಧಾನ ಪರಿಷತ್‌ ಸದಸ್ಯರಾಗಿರುವ ಚೌಪಾಲ್‌ ಅವರ ಪರವಾಗಿ ಬೆಂಬಲಿ ಗರು ಘೋಷಣೆಗಳನ್ನು ಕೂಗಿದ್ದಾರೆ.

ಬಿಹಾರ ವಿಧಾನಸಭೆಯ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯು ಇದೇ ಭಾನುವಾರ ಮಧ್ಯಾಹ್ನ 12.30ಕ್ಕೆ ನಡೆ ಯಲಿದೆ. ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಈ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಎನ್‌ಡಿಎ ಅಂಗಪಕ್ಷಗಳಾದ ಜೆಡಿಯು, ಬಿಜೆಪಿ, ಎಚ್‌ಎಎಂ ಮತ್ತು ವಿಕಾಸಶೀಲ ಇನ್ಸಾನ್‌ ಪಾರ್ಟಿಯ (ವಿಐಪಿ) ಮುಖಂಡರು ನಿತೀಶ್ ನಿವಾಸದಲ್ಲಿ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ವಿಧಾನಸಭೆಯಲ್ಲಿ ಸರಳ ಬಹುಮತ ಕ್ಕೆ 122 ಸದಸ್ಯರ ಬೆಂಬಲ ಬೇಕಿದೆ. ಎನ್‌ಡಿಎ 125 ಸದಸ್ಯರ ಬಲ ಹೊಂದಿದೆ. ಈಗ, ಪಕ್ಷೇತರ ಶಾಸಕ ಚಕೈ ಸುಮಿತ್ ಸಿಂಗ್‌ ಅವರು ನಿತೀಶ್‌ ಅವರನ್ನು ಭೇಟಿಯಾಗಿ ಬೆಂಬಲ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.