ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಇಲ್ಲಿನ ಗಾಂಧಿ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನವನ್ನು ಆಚರಿಸಿದ ಬಳಿಕ ನಿತೀಶ್ ಅವರು ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದರು.
‘ಬಿಹಾರವು ಅಭಿವೃದ್ಧಿಯತ್ತ ಸಾಗುತ್ತಿದೆ. ಬರುವ ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿಯೊಂದಿಗೆ ಸಾಗಲಿದೆ. 10 ಲಕ್ಷ ಯುವಕರಿಗೆ ಉದ್ಯೋಗ ನೀಡುವುದಾಗಿ ಈ ಹಿಂದೆ ಭರವಸೆ ನೀಡಿದ್ದೆವು. ಆದರೆ, ಇದೀಗ ರಾಜ್ಯದ ಒಂದು ಕೋಟಿ ಯುವಕರಿಗೆ ಉದ್ಯೋಗ ನೀಡಬೇಕೆನ್ನುವ ಹೊಸ ಗುರಿಯನ್ನು ನಿಗದಿಪಡಿಸಿದ್ದೇವೆ’ ಎಂದು ಹೇಳಿದರು.
‘ಉದ್ಯೋಗಾವಕಾಶ ನೀಡುವುದು ಆರಂಭದಿಂದಲೂ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಎನ್ಡಿಎ ಸರ್ಕಾರದ ಅಡಿಯಲ್ಲಿ ಬಿಹಾರವು ಅಭಿವೃದ್ಧಿಗೆ ಸಾಕ್ಷಿಯಾಗಿದೆ’ ಎಂದರು.
ರಾಜ್ಯಕ್ಕೆ ನಿತೀಶ್ ಘೋಷಣೆಗಳು:
*ಬರುವ ವರ್ಷಗಳಲ್ಲಿ ರಾಜ್ಯದಲ್ಲಿ ಒಂದು ಕೋಟಿ ಯುವಕರಿಗೆ ಸರ್ಕಾರಿ ಉದ್ಯೋಗ ಮತ್ತು ಇತರ ಉದ್ಯೋಗಾವಕಾಶ
*ರಾಜ್ಯದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಿಲಿಮಿನರಿ ಪರೀಕ್ಷೆ ಬರೆಯುವ ಎಲ್ಲ ಅಭ್ಯರ್ಥಿಗಳಿಗೂ ₹100 ಶುಲ್ಕ ನಿಗದಿ. ಮುಖ್ಯ ಪರೀಕ್ಷೆಗೆ ಹಾಜರಾಗಲು ಯಾವುದೇ ಶುಲ್ಕ ಇಲ್ಲ
*ಬಿಹಾರದಲ್ಲಿ ಬಂಡವಾಳ ಹೂಡಲು ಇಚ್ಛಿಸುವವರಿಗೆ ವಿಶೇಷ ರಿಯಾಯಿತಿ ನೀಡಲು ಸರ್ಕಾರ ನಿರ್ಧಾರ
*ಕಿಶನ್ಗಂಜ್ ಕಟಿಹಾರ ರೊಹತಾಸ್ ಶಿವಹರ್ ಲಖೀಸರಾಯ್ ಅಲವರ್ ಹಾಗೂ ಶೇಖ್ಪುರದಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ
*ಹಬ್ಬಗಳ ಸಂದರ್ಭದಲ್ಲಿ ಬಿಹಾರಕ್ಕೆ ಹೆಚ್ಚುವರಿ ವಿಶೇಷ ರೈಲು ಓಡಿಸಲು ರೈಲ್ವೆ ಸಚಿವಾಲಯಕ್ಕೆ ಮನವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.