ಲಖನೌ: ದೇಶದಲ್ಲಿ ದಲಿತ– ಬಹುಜನರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯು ಕಾಂಗ್ರೆಸ್ ಆಡಳಿತದಂತೆಯೇ ಬಿಜೆಪಿ ಆಡಳಿತದಲ್ಲೂ ಶೋಚನೀಯವಾಗಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕಿ ಮಾಯಾವತಿ ಸೋಮವಾರ ತಿಳಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯಂದು ಇಂದು (ಸೋಮವಾರ) ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳಿಗೆ ಸಂವಿಧಾನದಲ್ಲಿ ನೀಡಲಾದ ಮೀಸಲಾತಿಯು ಅವರಿಗೆ ಒಳ್ಳೆಯ ದಿನಗಳಿಗಿಂತ, ಕಟ್ಟ ದಿನಗಳಿಗೆ ಕಾರಣವಾಗಿದೆ. ಇದು ಆತಂಕಕಾರಿಯಾಗಿದೆ ಎಂದೂ ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಜನರು ನಿಜವಾದ ಅರ್ಥದಲ್ಲಿ ಮಿಷನರಿ ಅಂಬೇಡ್ಕರ್ವಾದಿಗಳಾಗಬೇಕಾಗುತ್ತದೆ. ಪರಸ್ಪರ ಒಗ್ಗಟ್ಟು ಮತ್ತು ರಾಜಕೀಯ ಸಕ್ರಿಯವಾದರೆ ಮಾತ್ರವೇ ದಬ್ಬಾಳಿಕೆ ಮತ್ತು ಅನ್ಯಾಯ ಇತ್ಯಾದಿಗಳಿಂದ ಸ್ವಾತಂತ್ರ್ಯವನ್ನು ಪಡೆಯಬಹುದು. ಆಳುವ ವರ್ಗವಾಗಬಹುದು ಎಂದು ಸಲಹೆ ನೀಡಿದ್ದಾರೆ.
'ಮೇರಾ ಭಾರತ್ ಮಹಾನ್ (ನನ್ನ ಶ್ರೇಷ್ಠ ಭಾರತ)' ಮತ್ತು 'ಅಭಿವೃದ್ಧಿ ಹೊಂದಿದ ಭಾರತ'ದ ಕನಸನ್ನು ಸಾಧ್ಯವಾಗಿಸಲು ಜಾತಿವಾದ ಮತ್ತು ಸಂಕುಚಿತ ಸ್ವಾರ್ಥ ರಾಜಕೀಯವನ್ನು ತ್ಯಜಿಸಿಬೇಕು ಎಂದು ಮಾಯಾವತಿ ಎಲ್ಲಾ ಸರ್ಕಾರಗಳಿಗೆ ಕಿವಿಮಾತು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.