ADVERTISEMENT

ಮೊದಲ ಅಲೆಯಿಂದ ಬುದ್ಧಿ ಕಲಿಯದ ಉತ್ತರ ಪ್ರದೇಶ ಸರ್ಕಾರ: ಬಿಜೆಪಿ ನಾಯಕನಿಂದಲೇ ಟೀಕೆ

ಪಿಟಿಐ
Published 27 ಜೂನ್ 2021, 11:53 IST
Last Updated 27 ಜೂನ್ 2021, 11:53 IST
ಕೋವಿಡ್‌ನಿಂದ ಮೃತಪಟ್ಟವರನ್ನು ಗಂಗಾನದಿ ತಟದಲ್ಲಿ ಸಮಾಧಿ ಮಾಡಿರುವುದು
ಕೋವಿಡ್‌ನಿಂದ ಮೃತಪಟ್ಟವರನ್ನು ಗಂಗಾನದಿ ತಟದಲ್ಲಿ ಸಮಾಧಿ ಮಾಡಿರುವುದು    

ಬಲ್ಲಿಯಾ: ಉತ್ತರ ಪ್ರದೇಶ ಕೋವಿಡ್‌ ಅನ್ನು ನಿಭಾಯಿಸಿದ ರೀತಿಯ ಬಗ್ಗೆ ಆಡಳಿತಾರೂಢ ಬಿಜೆಪಿಯ ನಾಯಕ ರಾಮ್‌ ಇಕ್ಬಾಲ್‌ ಸಿಂಗ್‌ ಕಿಡಿ ಕಾರಿದ್ದಾರೆ. ಕೋವಿಡ್‌ ಮೊದಲನೇ ಅಲೆಯಲ್ಲಿ ಪಾಠ ಕಲಿಯದ ಪರಿಣಾಮವಾಗಿ ಎರಡನೇ ಅಲೆಯಲ್ಲಿ ಪ್ರತಿ ಹಳ್ಳಿಗಳಲ್ಲಿ ಕನಿಷ್ಠ ಹತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಕೋವಿಡ್‌ ನಿರ್ವಹಣೆಯನ್ನು ಆಡಳಿತಾರೂಢ ಬಿಜೆಪಿಯ ಹಲವು ನಾಯಕರು ಪ್ರಶ್ನಿಸಿದ್ದಾರೆ. ಇದಕ್ಕೆ ಇತ್ತೀಚಿನ ಸೇರ್ಪಡೆ ರಾಮ್‌ ಇಕ್ಬಾಲ್‌ ಸಿಂಗ್‌.

ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಂಗ್‌, ‘ಕೋವಿಡ್‌ ಮೊದಲನೇ ಅಲೆಯಿಂದ ಆರೋಗ್ಯ ಇಲಾಖೆ ಪಾಠ ಕಲಿಯಲಿಲ್ಲ. ಹೀಗಾಗಿಯೇ ಎರಡನೇ ಅಲೆಯಲ್ಲಿ ಭಾರಿ ಸಂಖ್ಯೆಯ ಸಾವುಗಳು ಸಂಭವಿಸಿದವು,’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ,‘ ಎಂದು ಅವರು ಹೇಳಿದರು.

‘ಸೋಂಕಿಗೆ ಬಲಿಯಾದವರ ಕುಟುಂಬಸ್ಥರಿಗೆ ₹10 ಲಕ್ಷ ಪರಿಹಾರ ನೀಡಬೇಕು,’ ಎಂದು ಬಿಜೆಪಿ ನಾಯಕ ಸಿಂಗ್‌ ಒತ್ತಾಯಿಸಿದರು.

‘34 ಲಕ್ಷ ಜನಸಂಖ್ಯೆ ಇರುವ ಬಲ್ಲಿಯಾ ಜಿಲ್ಲೆಯಲ್ಲಿ ಸ್ವಾತಂತ್ರ್ಯನಂತರದ ‌ಈ 75 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ವೈದ್ಯರೇ ಲಭ್ಯವಿಲ್ಲದಂತಾಯಿತು,‘ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಲ್ಲಿಯಾ ಭೇಟಿಯ ವೇಳೆ ಆರೋಗ್ಯ ಇಲಾಖೆಯ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರು ಎಂದು ಮಾಧ್ಯಮಗಳು ಹೇಳಿದಾಗ, ‘ಅಧಿಕಾರಿಗಳು ಸಿಎಂ ಅವರನ್ನು ದಾರಿ ತಪ್ಪಿಸಿದ್ದಾರೆ ಮತ್ತು ಸತ್ಯ ಹೇಳಿಲ್ಲ,‘ ಎಂದು ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.