ADVERTISEMENT

ED ದಾಳಿ ವೇಳೆ ಹಣ ಸಿಕ್ಕಿಲ್ಲ, ನನ್ನ ಪತಿ ಸತ್ಯ ಬಹಿರಂಗಪಡಿಸುತ್ತಾರೆ: ಸುನೀತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮಾರ್ಚ್ 2024, 7:33 IST
Last Updated 27 ಮಾರ್ಚ್ 2024, 7:33 IST
<div class="paragraphs"><p>ಸುನೀತಾ ಕೇಜ್ರಿವಾಲ್</p></div>

ಸುನೀತಾ ಕೇಜ್ರಿವಾಲ್

   

ನವದೆಹಲಿ: ನಮ್ಮ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಯಾವುದೇ ರೀತಿಯ ಹಣ ಪತ್ತೆಯಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೆಹಲಿ ಅಬಕಾರಿ ನೀತಿ ಹಗರಣ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನನ್ನ ಪತಿ (ಅರವಿಂದ ಕೇಜ್ರಿವಾಲ್) ನಾಳೆ ನ್ಯಾಯಾಲಯದಲ್ಲಿ ಸತ್ಯವನ್ನು ಬಹಿರಂಗಪಡಿಸಲಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಅರವಿಂದ ಕೇಜ್ರಿವಾಲ್ ಅವರು ಎರಡು ದಿನಗಳ ಹಿಂದೆ ದೆಹಲಿಯಲ್ಲಿನ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಜಲ ಖಾತೆ ಸಚಿವೆ ಅತಿಶಿ ಅವರಿಗೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರ ಅವರ ವಿರುದ್ಧ ಕೇಸ್ ದಾಖಲಿಸಿದೆ. ಬಿಜೆಪಿಯವರಿಗೆ ದೆಹಲಿಯನ್ನು ನಾಶ ಮಾಡಬೇಕೆ?, ಜನರು ಸಂಕಷ್ಟದಲ್ಲಿ ಇರಬೇಕೆಂದು ಬಿಜೆಪಿಗರು ಬಯಸುತ್ತಾರೆಯೇ? ಎಂದು ಪ್ರಶ್ನಿಸಿರುವ ಸುನೀತಾ, ಬಿಜೆಪಿಯವರ ನಡೆ ಬಗ್ಗೆ ಅರವಿಂದ ಕೇಜ್ರಿವಾಲ್ ಅವರಿಗೆ ತುಂಬಾ ನೋವಾಗಿದೆ’ ಎಂದಿದ್ದಾರೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಇ.ಡಿ ಅಧಿಕಾರಿಗಳು 250ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದು, ಅಧಿಕಾರಿಗಳು ಹಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಹಣ ಸೇರಿದಂತೆ ಏನೂ ಸಿಕ್ಕಿಲ್ಲ. ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ ಎಂಬುದನ್ನು ನ್ಯಾಯಾಲಯದಲ್ಲಿ ನನ್ನ ಪತಿ ಬಹಿರಂಗಪಡಿಸಲಿದ್ದು, ಪುರಾವೆಗಳನ್ನು ನೀಡಲಿದ್ದಾರೆ ಎಂದು ಸುನೀತಾ ತಿಳಿಸಿದ್ದಾರೆ.

ಕೇಜ್ರಿವಾಲ್‌ ಅವರನ್ನು ಇ.ಡಿ ಅಧಿಕಾರಿಗಳು ಮಾರ್ಚ್‌ 21ರಂದು ಬಂಧಿಸಿದ್ದರು. ನಂತರ, ದೆಹಲಿ ಹೈಕೋರ್ಟ್‌ ಅವರನ್ನು ಇ.ಡಿ ವಶಕ್ಕೆ ನೀಡಿದೆ.

ಬಂಧನದ ಹೊರತಾಗಿಯೂ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿದಿರುವ ಅರವಿಂದ ಕೇಜ್ರಿವಾಲ್‌ ಅವರು ಇ.ಡಿ ವಶದಲ್ಲಿರುವಾಗಲೇ ಎರಡು ಸರ್ಕಾರಿ ನಿರ್ದೇಶನವನ್ನು ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.