ADVERTISEMENT

ಕೇಂದ್ರೀಯ ರೈಲ್ವೆ ವ್ಯಾಪ್ತಿಯ ನಿಲ್ದಾಣಗಳಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ಗೆ ನಿಷೇಧ

ಪಿಟಿಐ
Published 28 ಮಾರ್ಚ್ 2019, 12:11 IST
Last Updated 28 ಮಾರ್ಚ್ 2019, 12:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೇಂದ್ರೀಯ ರೈಲ್ವೆ ವ್ಯಾಪ್ತಿಯ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ನಿಂಬೆ ಹಣ್ಣಿನ ರಸ ಹಾಗೂ ಇತರ ಸಿರಪ್‌ಗಳಿಂದ ತಯಾರಿಸಿದ ಪಾನೀಯಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ರೈಲು ನಿಲ್ದಾಣದಲ್ಲಿ ಅನಾರೋಗ್ಯಕರ ರೀತಿಯಲ್ಲಿ ಪಾನೀಯ ತಯಾರಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಬಳಿಕ ಇವುಗಳಿಗೆ ನಿಷೇಧ ಹೇರಲಾಗಿದೆ.

ಮುಂಬೈನ ಕುರ್ಲಾ ರೈಲು ನಿಲ್ದಾಣದ ಆಹಾರ ಮಳಿಗೆಯೊಂದರಲ್ಲಿ ವ್ಯಕ್ತಿಯೊಬ್ಬರು ಬರಿಗೈಯಲ್ಲಿಯೇ ನಿಂಬೆರಸ ಮಿಶ್ರಣ ಮಾಡಿ ಪಾನೀಯ ತಯಾರಿಸುತ್ತಿದ್ದ ವಿಡಿಯೊವನ್ನು ಪ್ರಯಾಣಿಕರೊಬ್ಬರು ಚಿತ್ರೀಕರಿಸಿ, ಬಳಿಕ ಕೇಂದ್ರೀಯ ರೈಲ್ವೆಯ ಟ್ವಿಟ್ಟರ್‌ ಖಾತೆಗೆ ಟ್ಯಾಗ್‌ ಮಾಡಿದ್ದರು.

ADVERTISEMENT

’ನಿಂಬೆ ಹಣ್ಣಿನ ಜ್ಯೂಸ್‌ ಹಾಗೂ ಕೃತಕ ಸವಿಯ ಮಿಶ್ರಣದಿಂದ ತಯಾರಿಸುವ ಪಾನೀಯಗಳನ್ನು ಕೇಂದ್ರೀಯ ರೈಲ್ವೆ ವ್ಯಾಪ್ತಿಯ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ನಿಷೇಧಿಸಲಾಗಿದೆ‘ ಎಂದು ಕೇಂದ್ರೀಯ ರೈಲ್ವೆಯ ಪ್ರಧಾನ ಮುಖ್ಯ ಕಮರ್ಷಿಯಲ್‌ ಮ್ಯಾನೇಜರ್‌ ಶೈಲೇಂದ್ರ ಕುಮಾರ್‌ ತಿಳಿಸಿದ್ದಾರೆ.

ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಇಂತಹ ಪಾನೀಯಗಳಿಗೆ ನಿಷೇಧ ಹೇರಲಾಗಿದೆ ಎಂದಿದ್ದಾರೆ. ತಾಜಾ ಹಣ್ಣುಗಳ ಜ್ಯೂಸ್‌ಗೆ ನಿಷೇಧ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ವಿಡಿಯೊದಲ್ಲಿ ದಾಖಲಾಗಿದ್ದ ಆಹಾರ ಮಳಿಗೆಗೆ ರೈಲ್ವೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಮಧ್ಯಪ್ರದೇಶ ಮತ್ತು ಕರ್ನಾಟಕದ ಕೆಲ ಪ್ರದೇಶಗಳು ಕೇಂದ್ರೀಯ ರೈಲ್ವೆಯ ವ್ಯಾಪ್ತಿಗೆ ಒಳಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.