ನವದೆಹಲಿ: ದೇಶದಲ್ಲಿ ಕೆಲ ದಿನಗಳಿಂದ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳಿಂದ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಶನಿವಾರ ಹೇಳಿದ್ದಾರೆ.
ದೇಶದ ಕೆಲ ಜಿಲ್ಲೆಗಳಲ್ಲಿ ಮಾತ್ರ ಪ್ರಕರಣಗಳು ಏರಿಕೆ ದಾಖಲಾಗುತ್ತಿವೆಯೇ ಹೊರತು, ಎಲ್ಲೂ ವೈರಸ್ನ ಹೊಸ ರೂಪಾಂತರಿ ಪತ್ತೆಯಾಗಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದಿರುವುದು ಹಾಗೂ ‘ಬೂಸ್ಟರ್ ಡೋಸ್’ ಪಡೆಯುವಲ್ಲಿ ಜನರು ಅಷ್ಟಾಗಿ ಉತ್ಸಾಹ ತೋರದಿರು ವುದರಿಂದ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕೇರಳದ 7 ಮತ್ತು ಮಿಜೋರಾಂ ನಲ್ಲಿ 5 ಜಿಲ್ಲೆಗಳೂ ಸೇರಿದಂತೆ ದೇಶದ 17 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ ಶೇ 10ಕ್ಕಿಂತ ಹೆಚ್ಚು ವರದಿಯಾಗಿದೆ. ಕೇರಳದ 7, ಮಹಾರಾಷ್ಟ್ರ ಮತ್ತು ಮಿಜೋರಾಂ ತಲಾ 4 ಜಿಲ್ಲೆಗಳೂ ಸೇರಿದಂತೆ ದೇಶದ 24 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ ಶೇ 5ರಿಂದ 10ರಷ್ಟಿದೆ ಎಂದು ಮೂಲಗಳು ತಿಳಿಸಿವೆ.
‘ದೇಶದಲ್ಲಿ ವೈರಸ್ನ ಹೊಸ ರೂಪಾಂತರಿ ಪತ್ತೆಯಾಗಿಲ್ಲ. ಪ್ರಸ್ತುತ ದೇಶದಲ್ಲಿ ಬಿಎ.2 ಜೊತೆಗೆ ಬಿಎ.4, ಬಿಎ 5 ತಳಿಯಿದ್ದು, ಇವು ಓಮೈಕ್ರಾನ್ ಉಪತಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಪ್ರಸರಣ ಹೊಂದಿವೆ’ ಎಂದುಕೋವಿಡ್– 19ರ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್.ಕೆ.ಅರೋರಾ ತಿಳಿಸಿ ದ್ದಾರೆ.‘ಆಸ್ಪತ್ರೆಗೆ ದಾಖಲಾಗುತ್ತಿರುವವರ ಮತ್ತು ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ ಸೋಂಕಿನ ಹೆಚ್ಚಳವು ಕೆಲ ಭೌಗೋಳಿಕ ಪ್ರದೇಶಗಳಿಗೆ ಸೀಮಿತವಾಗಿದೆ’ ಎಂದು ದೆಹಲಿಯ ಏಮ್ಸ್ನ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.