ನವದೆಹಲಿ : ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 58ಕ್ಕೆ ಇಳಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸಿಬ್ಬಂದಿ ಖಾತೆ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಕರ್ತವ್ಯ ಲೋಪ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಅವಧಿಗೆ ಮುನ್ನವೇ ಕಡ್ಡಾಯವಾಗಿ ನಿವೃತ್ತಿಗೊಳಿಸುವ ಅಧಿಕಾರ ಸರ್ಕಾರಕ್ಕಿದೆ. ನಿವೃತ್ತಿಗೊಳಿಸಲು ಮೂರು ತಿಂಗಳಿಗೂ ಕಡಿಮೆ ಇಲ್ಲದಂತೆ ನೋಟಿಸ್ ನೀಡಬೇಕು ಅಥವಾ ನೋಟಿಸ್ ಬದಲಾಗಿ ಮೂರು ತಿಂಗಳ ವೇತನ ಮತ್ತು ಸೌಲಭ್ಯಗಳನ್ನು ನೀಡಬೇಕಾಗುತ್ತದೆ ಎಂದರು.
ನೌಕರರ ಮುಷ್ಕರ: ನೋಟಿಸ್ ಕಡ್ಡಾಯ
ನವದೆಹಲಿ (ಪಿಟಿಐ): ಉದ್ಯೋಗಿಗಳು ಮುಷ್ಕರ ನಡೆಸಬೇಕಾದರೆ 14 ದಿನಗಳ ಮೊದಲು ನೋಟಿಸ್ ನೀಡುವುದು ಕಡ್ಡಾಯ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಬುಧವಾರ ರಾಜ್ಯಸಭೆಗೆ ಹೇಳಿದರು.
‘ಹೊಸ ಕಾರ್ಮಿಕ ಕಾನೂನನ್ನು ಸರ್ಕಾರವು ಜಾರಿಗೆ ತರಲು ಉದ್ದೇಶಿಸಿದೆ. ಈ ಸಂಬಂಧಿಸಿ ಕಾರ್ಮಿಕ ಸಚಿವಾಲಯವು ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದೆ’ ಎಂದು ಅವರು ತಿಳಿಸಿದರು.
ಎರಡನೇ ರಾಜಧಾನಿ ಇಲ್ಲ
ನವದೆಹಲಿ (ಪಿಟಿಐ): ದಕ್ಷಿಣ ಭಾರತದ ಯಾವುದೇ ನಗರವನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆಗುರುವಾರ ತಿಳಿಸಿದೆ.
ಆಂಧ್ರಪ್ರದೇಶದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯ ಕೆ.ವಿ ರಾಮಚಂದ್ರರಾವ್ ಅವರ ಪ್ರಶ್ನೆಗೆ ಉತ್ತರಿಸಿದಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ದಕ್ಷಿಣದ ಯಾವುದೇ ನಗರಕ್ಕೆ ದೇಶದ ರಾಜಧಾನಿಯ ಸ್ಥಾನಮಾನ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.