ADVERTISEMENT

ಮೇಕೆದಾಟು: ಕರ್ನಾಟಕ ಜತೆ ಮಾತುಕತೆಗೆ ಮಹತ್ವ ಇಲ್ಲ,ಕೇಂದ್ರದ ಭರವಸೆ ಇದೆ– ಸ್ಟಾಲಿನ್

ಪ್ರಜಾವಾಣಿ ವಿಶೇಷ
Published 19 ಜುಲೈ 2021, 11:13 IST
Last Updated 19 ಜುಲೈ 2021, 11:13 IST
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್    

ನವದೆಹಲಿ: ಮೇಕೆದಾಟು ಯೋಜನೆ ಕುರಿತಂತೆ ಕರ್ನಾಟಕ ಸರ್ಕಾರದೊಂದಿಗಿನ ಯಾವುದೇ ಮಾತುಕತೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತಳ್ಳಿ ಹಾಕಿದ್ದಾರೆ.

ಈ ಯೋಜನೆಯನ್ನು ಮುಂದುವರಿಸಲು ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಜಲಶಕ್ತಿ ಸಚಿವರು ತಮಿಳುನಾಡಿಗೆ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಮಾತುಕತೆಗೆ ಯಾವುದೇ ಮಹತ್ವವಿಲ್ಲ (ಕರ್ನಾಟಕದ ಜೊತೆ). ನಮ್ಮ ಜಲಸಂಪನ್ಮೂಲ ಸಚಿವರು ಮಾತುಕತೆ ಕುರಿತಂತೆ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ,’ ಎಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಟಾಲಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ಯೋಜನೆ ಬಗ್ಗೆ ಯಾವುದೇ ಅನುಮಾನಗಳಿದ್ದರೆ ಅದನ್ನು ಪರಿಹರಿಸುವ ಉದ್ದೇಶದಿಂದ ಸಭೆ ನಡೆಸುವ ಕುರಿತಂತೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಬರೆದಿದ್ದ ಪತ್ರದ ಬೆನ್ನಲ್ಲೇ ಸ್ಟಾಲಿನ್ ಈ ಹೇಳಿಕೆ ನೀಡಿದ್ದಾರೆ.

ಮೇಕೆದಾಟುವಿನಲ್ಲಿ ಜಲಾಶಯವನ್ನು ನಿರ್ಮಿಸುವ ಕರ್ನಾಟಕದ ಯೋಜನೆಯನ್ನು ವಿರೋಧಿಸಲು ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಮುಖ್ಯಮಂತ್ರಿಗಳ ಜಂಟಿ ಕಾರ್ಯತಂತ್ರದ ಅಗತ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

‘ಪ್ರಧಾನ ಮಂತ್ರಿ ನಮಗೆ (ಮೇಕೆಡಾಟು ಕುರಿತು) ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಜಲಶಕ್ತಿ ಸಚಿವರಿಂದಲೂ ಸಹ ನಮಗೆ ಭರವಸೆ ಸಿಕ್ಕಿದೆ (ಯೋಜನೆ ಕಾರ್ಯಗತವಾಗುವುದಿಲ್ಲ). ನಮಗೆ ಈ ಬಗ್ಗೆ ಭರವಸೆ ಇದೆ. ಮೇಲಾಗಿ, ಈ ವಿಷಯವು ಸುಪ್ರೀಂ ಕೋರ್ಟ್ ಮುಂದೆ ಇದೆ. ನಾವು ಈ ಸಮಸ್ಯೆಯನ್ನು ಕಾನೂನಿನ ಮೂಲಕ ಎದುರಿಸುತ್ತೇವೆ, ’ ಎಂದು ಸ್ಟಾಲಿನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.