ADVERTISEMENT

ನಿರುದ್ಯೋಗ ಇಲ್ಲವೇ ಇಲ್ಲ, ಜನರಲ್ಲಿ ಕೆಲಸದ ಕೌಶಲವೇ ಇಲ್ಲ

ಕೇಂದ್ರ ಕಾರ್ಮಿಕ ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 20:15 IST
Last Updated 15 ಸೆಪ್ಟೆಂಬರ್ 2019, 20:15 IST
ಸಂತೋಷ್ ಗಂಗ್ವಾರ್
ಸಂತೋಷ್ ಗಂಗ್ವಾರ್   

ಲಖನೌ: ಉತ್ತರ ಭಾರತದಲ್ಲಿ ಅರ್ಹತೆ ಇರುವ ಯುವ ಜನರೇ ಇಲ್ಲದಿರುವುದು ನಿರುದ್ಯೋಗ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ. ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಉಬರ್‌ ಮತ್ತು ಓಲಾ ಟ್ಯಾಕ್ಸಿಗಳಿಂದಾಗಿ ಕಾರು ಮಾರಾಟ ಪ್ರಮಾಣ ಕುಸಿದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇತ್ತೀಚೆಗಷ್ಟೇ ಹೇಳಿದ್ದರು. ಈ ಹೇಳಿಕೆಗೂ ಖಂಡನೆ ವ್ಯಕ್ತವಾಗಿತ್ತು.

‘ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲವೇ ಇಲ್ಲ... ಉದ್ಯೋಗಗಳು ಹೇರಳವಾಗಿವೆ. ಆದರೆ, ಉತ್ತರ ಭಾರತದಲ್ಲಿ ಅರ್ಹತೆ ಇರುವ ಯುವ ಜನರೇ ಇಲ್ಲ’ ಎಂದು ತಮ್ಮ ಲೋಕಸಭಾ ಕ್ಷೇತ್ರ ಬರೇಲಿಯಲ್ಲಿ ಮಾತನಾಡುತ್ತಾ ಗಂಗ್ವಾರ್‌ ಹೇಳಿದ್ದಾರೆ. ಮೊದಲ ನೂರು ದಿನಗಳಲ್ಲಿ ಕೇಂದ್ರದ ಸಾಧನೆಯನ್ನು ಬಣ್ಣಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

ಕಾರ್ಮಿಕ ಸಚಿವನಾಗಿರುವುದರಿಂದ ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲ ಎಂಬುದು ತಮಗೆ ತಿಳಿದಿದೆ. ಉತ್ತರ ಭಾರತದಲ್ಲಿ ಅರ್ಹ ಯುವ ಜನರೇ ಸಿಗುತ್ತಿಲ್ಲ ಎಂದು ಹಲವು ಕಂಪನಿಗಳು ತಮಗೆ ತಿಳಿಸಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಗಂಗ್ವಾರ್‌ ಹೇಳಿಕೆಯನ್ನು ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಖಂಡಿಸಿವೆ. ಅವರು ದೇಶದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿವೆ.‘ಇದು ಜನರಿಗೆ ಮಾಡಿದ ಅವಮಾನ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

***

ಉತ್ತರ ಭಾರತೀಯರನ್ನು ದೂಷಿಸುವುದು ಸರಿಯಲ್ಲ. ನಿಮ್ಮ ಆಳ್ವಿಕೆಯಲ್ಲಿ ಹೊಸ ಉದ್ಯೋಗ ಸೃಷ್ಟಿಯಾಗಿಲ್ಲ, ಸರ್ಕಾರದ ನೀತಿಯಿಂದ ಹಳೆಯ ಉದ್ಯೋಗಗಳು ನಷ್ಟವಾಗಿವೆ.

– ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.