ADVERTISEMENT

ಚೀನಾ–ಮ್ಯಾನ್ಮಾರ್‌ ಗಡಿ: ಈಶಾನ್ಯ ಉಗ್ರ ಗುಂಪುಗಳು ಮತ್ತೆ ಒಗ್ಗಟ್ಟು?

ಪಿಟಿಐ
Published 11 ಜನವರಿ 2022, 16:26 IST
Last Updated 11 ಜನವರಿ 2022, 16:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ (ಪಿಟಿಐ): ಇತ್ತೀಚಿನ ತಿಂಗಳುಗಳಲ್ಲಿ ಈಶಾನ್ಯ ಭಾರತದ ಭಾಗಗಳನ್ನು ಉಗ್ರರು ನಡೆಸಿದ ದಾಳಿಗಳು ಕಂಗೆಡಿಸಿವೆ. ಇದು ಭಾರತ ಮತ್ತು ಮ್ಯಾನ್ಮಾರ್‌ ಗಡಿ ಭಾಗಗಳಲ್ಲಿ ಉಗ್ರರು ಮತ್ತೆ ಒಂದುಗೂಡುತ್ತಿರುವುದನ್ನು ಸೂಚಿಸುತ್ತಿದೆ ಎಂದು ರಕ್ಷಣಾ ಪರಿಣಿತರು ಆತಂಕ ವ್ಯಕ್ತಪಡಿಸಿದ್ದಾರೆ.

ಮಣಿಪುರದಲ್ಲಿ ಚುನಾವಣೆ ನಡೆಯುವುದರಿಂದ ಗಡಿಯಲ್ಲಿ ಇನ್ನೂಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಸ್ಥಗಿತಗೊಂಡಿರುವ ಶಾಂತಿ ಮಾತುಕತೆಗಳಿಂದ ವಿಭಜಿತಗೊಂಡಿರುವ ಉಗ್ರ ಗುಂಪುಗಳು ಹಾಗೂ ಮಣಿಪುರಿ ಬಂಡುಕೋರ ಗುಂಪುಗಳು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಅಡ್ಡಿಪಡಿಸಲು ಚೀನಾದ ಯುನ್ನಾನ್ ಪ್ರಾಂತ್ಯ ಮತ್ತು ಮ್ಯಾನ್ಮಾರ್‌ ಗಡಿ ಪ್ರದೇಶಗಳಲ್ಲಿ ಮತ್ತೆ ಗುಂಪುಗೂಡುತ್ತಿವೆ ಎಂದು ರಕ್ಷಣಾ ತಜ್ಞರು ಅಂದಾಜಿಸಿದ್ದಾರೆ.

ADVERTISEMENT

‘ಚೀನಾದಲ್ಲಿ ಉಗ್ರಗಾಮಿ ಗುಂಪುಗಳು ಮರು ಸಂಘಟನೆಯಾಗುತ್ತಿವೆ. ಅದಕ್ಕಾಗಿ ಗುಂಪಿನ ಹಲವು ಸದಸ್ಯರು ಚೀನಾದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದುಅಸ್ಸಾಂ ರೈಫಲ್ಸ್‌ನ ಮಾಜಿ ಇನ್ಸ್‌ಪೆಕ್ಟರ್ ಜನರಲ್ ಮೇಜರ್ ಜನರಲ್ ಭಬಾನಿ ಎಸ್‌.ದಾಸ್‌ ಅವರು ಪಿಟಿಐಗೆ ತಿಳಿಸಿದ್ದಾರೆ.

ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಐ), ಪೀಪಲ್ಸ್ ಲಿಬರೇಶನ್ ಆರ್ಮಿ ಆಫ್ ಮಣಿಪುರ ಮತ್ತು ಶಾಂತಿ ಮಾತುಕತೆಗೆ ವಿರುದ್ಧವಾಗಿರುವ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಕೆ) ನ ವಿಭಜಿತ ಬಣಗಳು ಗಡಿನಾಡಿನಲ್ಲಿ ಮತ್ತೆ ಗುಂಪುಗೂಡುತ್ತಿವೆ ಎಂದು ಹೇಳಲಾಗಿದೆ.

‘ಚೀನಾದಲ್ಲಿ ಸಂಭವಿಸುತ್ತಿರುವ ಅಂಶವನ್ನು ನಿರ್ಲಕ್ಷಿಸಲಾಗುವುದಿಲ್ಲ. ಶಾಂತಿ ಮಾತುಕತೆಗಳಲ್ಲಿ ಉಂಟಾದ ಅಸ್ಥಿರ ಸಮಸ್ಯೆಗಳಿಂದಾಗಿ ನಾಗಾಗಳು ಪ್ರಕ್ಷ್ಯುಬ್ಧಗೊಂಡಿರುವುದನ್ನು ಗಮನಿಸಬೇಕು. ಮಣಿಪುರಿ ಬಂಡುಕೋರರೂ ಮುಂಬರುವ ವಿಧಾನಸಭೆ ಚುನಾವಣೆಗೆ ಅಡ್ಡಿಯುಂಟು ಮಾಡಲಿದ್ದಾರೆ ಎನ್ನಲಾಗಿದೆ’ ಎಂದು ಬಿಎಸ್‌ಎಫ್‌ನ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಸಂಜೀವ್‌ ಕ್ರಿಶನ್‌ ಸೂದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.