ನವದೆಹಲಿ: ನಾವು ಕಾಂಗ್ರೆಸ್ನವರು ದೇಶಕ್ಕಾಗಿ ನಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದೇವೆ,ತ್ಯಾಗಗಳನ್ನೂ ಮಾಡಿದ್ದೇವೆ.ದೇಶದ ಒಗ್ಗಟ್ಟಿಗಾಗಿ ಇಂದಿರಾ ಗಾಂಧಿ ತಮ್ಮ ಪ್ರಾಣ ನೀಡಿದರು.ದೇಶಕ್ಕಾಗಿ ರಾಜೀವ್ ಗಾಂಧಿಯೂ ಪ್ರಾಣ ನೀಡಿದರು.ಅಂದಹಾಗೆ ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ, ಆರ್ಎಸ್ಎಸ್ ನಾಯಕರ ಮನೆಯಲ್ಲಿ ಕಡೇ ಪಕ್ಷ ಒಂದು ನಾಯಿಯಾದರೂ ಸತ್ತಿದೆಯಾ? ಎಂಬುದನ್ನು ನೀವೇ ಹೇಳಿ ನೋಡೋಣ. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ನಿಮ್ಮ ಯಾವ ನಾಯಕರು ಜೈಲಿಗೆ ಹೋಗಿದ್ದಾರೆ?- ಹೀಗೆ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ.
ಗುರುವಾರ ಮಹಾರಾಷ್ಟ್ರಜಲ್ಗಾಂವ್ ಜಿಲ್ಲೆಯ ಫೈಜ್ಪುರ್ ಎಂಬಲ್ಲಿ ಜನ ಸಂಘರ್ಷ್ ಯಾತ್ರೆಯ ಎರಡನೇ ಹಂತದ ರ್ಯಾಲಿಗೆ ಚಾಲನೆ ನೀಡಿ ಖರ್ಗೆ ಈ ರೀತಿ ಮಾತನಾಡಿದ್ದಾರೆ.
ಕಳೆದ ವರ್ಷ ಫೆಬ್ರುವರಿಯಲ್ಲಿ ಲೋಕಸಭೆಯಲ್ಲಿಇದೇ ರೀತಿಯ ಮಾತುಗಳನ್ನಾಡಿದ್ದಕ್ಕೆ ಮೋದಿ ಖರ್ಗೆಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ದೇಶದ ಒಗ್ಗಟ್ಟಿಗಾಗಿ ಗಾಂಧೀಜಿ, ಇಂದಿರಾ ಜೀ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.ನಿಮ್ಮ ಕಡೆಯಿಂದ ಯಾರು ಏನು ಮಾಡಿದ್ದಾರೆ? ಒಂದು ನಾಯಿ ಕೂಡಾ ಮಾಡಿಲ್ಲ ಎಂದು ಖರ್ಗೆ ಅಂದು ಹೇಳಿದ್ದರು.
ಲೋಕಸಭೆಯನ್ನುದ್ದೇಶಿಸಿ ಮೋದಿ ಭಾಷಣ ಮಾಡಿದಾಗ,ಖರ್ಗೆಯವರ ಈ ಮಾತನ್ನು ಖಂಡಿಸಿದ್ದರು. ಭಾರತದ ಸ್ವಾತಂತ್ರ್ಯಕ್ಕಾಗಿ ಭಗತ್ ಸಿಂಗ್, ಚಂದ್ರ ಶೇಖರ್ ಆಜಾದ್ ಅವರು ಮಾಡಿದ ತ್ಯಾಗಗಳನ್ನು ಕಾಂಗ್ರೆಸ್ ಹೇಳುವುದೇ ಇಲ್ಲ. ಬರೀ ಒಂದೇ ಒಂದು ಕುಟುಂಬ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದೆ ಎಂದು ಅಂದುಕೊಂಡಿದ್ದಾರೆ ಎಂದಿದ್ದರು ಮೋದಿ.
ಫೈಜ್ಪುರ್ನಲ್ಲಿ 1936ರಲ್ಲಿ ಕಾಂಗ್ರೆಸ್ ಮೊದಲ ಬಾರಿ ಸಮಾವೇಶವೇರ್ಪಡಿಸಿತ್ತು.ಆ ಸಮಾವೇಶದಲ್ಲಿ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.