ADVERTISEMENT

’ಸಹಜೀವನ: ಸರಿಯೇ ಎಂದು ನಿರ್ಧರಿಸುವುದು ಕೋರ್ಟ್ ಕೆಲಸವಲ್ಲ‘

ಪಿಟಿಐ
Published 8 ಜೂನ್ 2021, 12:03 IST
Last Updated 8 ಜೂನ್ 2021, 12:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಂಡೀಗಡ: ಮದುವೆಯ ಪವಿತ್ರ ಬಂಧನವಿಲ್ಲದೇ ಯುವ ಜೋಡಿಯು ಸಹಜೀವನ ನಡೆಸಬಹುದೇ, ಬೇಡವೇ ಎಂಬುದನ್ನು ನಿರ್ಧರಿಸುವುದು ಕೋರ್ಟ್ ಕೆಲಸವಲ್ಲ ಎಂದು ಪಂಜಾಬ್‌ ಮತ್ತು ಹರಿಯಾಣ ಕೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ, ಸಹಜೀವನ ನಡೆಸಲು ಬಯಸಿದ್ದ ಜೋಡಿಗೆ ರಕ್ಷಣೆ ಒದಗಿಸಲೂ ಆದೇಶಿಸಿದೆ.

ನಮಗೆ ರಕ್ಷಣೆಯನ್ನು ಒದಗಿಸಬೇಕು ಮತ್ತು ಕುಟುಂಬದ ಸದಸ್ಯರಿಂದ ಮುಕ್ತವಾಗಿರಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಪಂಜಾಬ್‌ನ ಬತಿಂದಾದ 17 ವರ್ಷದ ಹುಡುಗಿ ಮತ್ತು 20 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಈ ಕುರಿತು ಆದೇಶವನ್ನು ಹೊರಡಿಸಿತು.

ಪಂಜಾಬ್‌, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮರ್ಯಾದೆಗೇಡು ಹತ್ಯೆ ಪ್ರಚಲಿತವಾಗಿದೆ. ಹೀಗಾಗಿ, ಇಂಥ ಜೋಡಿಗಳಿಗೆ ರಕ್ಷಣೆ ಒದಗಿಸುವುದು ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂದೂ ಹೇಳಿತು.

ADVERTISEMENT

‘ಹುಡುಗಿಯ ಪೋಷಕರು ತಾವು ನೋಡಿದ ಹುಡುಗನ ಮದುವೆ ಆಗಬೇಕು ಎಂದು ಬಯಸುತ್ತಿದ್ದಾರೆ. ಅವರಿಗೆ ನಮ್ಮ ಬಾಂಧವ್ಯ ತಿಳಿದಿಲ್ಲ. ಈಗ ಹುಡುಗಿ ಮನೆಯಿಂದ ಹೊರಗೆ ಬಂದಿದ್ದಾಳೆ. ನಾವು ರಕ್ಷಣೆ ಕೋರಿ ಬತಿಂದಾ ಪೊಲೀಸ್‌ ವರಿಷ್ಠರಿಗೆ ಮನವಿ ಸಲ್ಲಿಸಿದೆವು. ಅದಕ್ಕೆ ಸ್ಪಂದನೆ ಸಿಗಲಿಲ್ಲ‘ ಎಂದು ಯುವಜೋಡಿ ಅರ್ಜಿ ಸಲ್ಲಿಸಿತ್ತು.

ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೋಕೇಟ್ ಜನರಲ್‌ ಅವರು, ಈಗ ರಕ್ಷಣೆಯನ್ನು ಕೋರಿರುವ ಜೋಡಿಗೆ ಮದುವೆ ಆಗಿಲ್ಲ. ಪರಸ್ಪರ ಇಚ್ಛಿಸಿ ಸಹಜೀವನ ನಡೆಸುತ್ತಿದ್ದಾರೆ. ಕೆಳಹಂತದ ಕೋರ್ಟ್‌ಗಳು ಇಂತಹ ಪ್ರಕರಣಗಳನ್ನು ಈ ಹಿಂದೆ ವಜಾ ಮಾಡಿವೆ ಎಂಬುದನ್ನು ಪೀಠದ ಗಮನಕ್ಕೆ ತಂದರು.

‘ಅದರ ಆಧಾರದಲ್ಲಿ ಈಗ ರಕ್ಷಣೆ ನಿರಾಕರಿಸುವುದಾದರೆ ಕೋರ್ಟ್‌ ಕೂಡಾ ತನ್ನ ಕರ್ತವ್ಯ ಮಾಡಬೇಕಾಗುತ್ತದೆ. ಸಂವಿಧಾನದ ವಿಧಿ 21ರಲ್ಲಿ ಹೇಳಿರುವಂತೆ ಜನರ ಜೀವನ, ಸ್ವಾತಂತ್ರದ ಹಕ್ಕು ರಕ್ಷಿಸಬೇಕಾಗುತ್ತದೆ’ ಎಂದು ಜೂನ್‌ 3ರಂದು ಹೊರಡಿಸಲಾದ ಆದೇಶದಲ್ಲಿ ನ್ಯಾಯಮೂರ್ತಿ ಸಂತ್ ಪ್ರಕಾಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.