ಮುಂಬೈ: ಹೋಟೆಲ್ಗಳನ್ನು ತೆರೆದಿರಿಸುವಂತೆ ತನ್ನ ಸದಸ್ಯರಿಗೆ ಭಾರತೀಯ ಹೋಟೆಲ್ ಮತ್ತು ರೆಸ್ಟೊರೆಂಟ್ ಸಂಘಟನೆಗಳ ಒಕ್ಕೂಟವು (ಎಫ್ಎಚ್ಆರ್ಎಐ) ಹೇಳಿದೆ. ಆದರೆ, ಕೊರೊನಾ ವೈರಸ್ ತಡೆಗೆ ಸಂಬಂಧಿಸಿ ಸರ್ಕಾರ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಸಲಹೆ ಕೊಟ್ಟಿದೆ.
ನೈರ್ಮಲ್ಯ ಕಾಯ್ದುಕೊಳ್ಳುವುದಕ್ಕೆ ಮತ್ತು ಸೋಂಕು ತಡೆಗೆ ಅಗತ್ಯವಾದ ಕ್ರಮಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದೂ ಸೂಚಿಸಿದೆ.
ಸ್ಥಳೀಯಾಡಳಿತವು ನಿರ್ದಿಷ್ಟವಾದ ನಿರ್ದೇಶನಗಳನ್ನು ನೀಡಿದರೆ ಅದರ ಪ್ರಕಾರ ಕ್ರಮ ಕೈಗೊಳ್ಳಿ. ಯಾವುದೇ ಹೋಟೆಲ್ ಅಥವಾ ರೆಸ್ಟೊರೆಂಟ್ ಸ್ವಯಂಪ್ರೇರಣೆಯಿಂದ ಬಂದ್ ಮಾಡುವುದಿದ್ದರೆ ಅದಕ್ಕೆ ಅಡ್ಡಿ ಇಲ್ಲ ಎಂದೂ ಎಫ್ಎಚ್ಆರ್ಎಐ ಹೇಳಿದೆ.
ಸಿಬ್ಬಂದಿಯ ಮೇಲೆ ನಿಗಾ ಇರಿಸಬೇಕು ಮತ್ತು ಅವರ ವೈಯಕ್ತಿಕ ನೈರ್ಮಲ್ಯದ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಲಾಗಿದೆ.
ಸಿಬ್ಬಂದಿ, ಆಹಾರ ಸೇವನೆಗೆ ಬರುವವರು ಮತ್ತು ಪ್ರವಾಸಿಗರ ಬಗ್ಗೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಮಾರ್ಗದರ್ಶಿಯನ್ನು ಸದಸ್ಯರಿಗೆ ಎಫ್ಎಚ್ಆರ್ಎಐ ಕಳುಹಿಸಿಕೊಟ್ಟಿದೆ.
‘ಸಿಬ್ಬಂದಿ ಮತ್ತು ಗ್ರಾಹಕರನ್ನು ತಪಾಸಣೆಗೆ ಒಳಪಡಿಸಬೇಕು. ಕೆಮ್ಮು, ಶೀತ ಮತ್ತು ಜ್ವರದ ಲಕ್ಷಣ ಕಂಡು ಬಂದರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕಳುಹಿಸಬೇಕು. ಹೋಟೆಲ್ ಮತ್ತು ರೆಸ್ಟೊರೆಂಟ್ಗಳನ್ನು ಸ್ವಚ್ಛವಾಗಿ ಇರಿಸಬೇಕು, ವೈರಸ್ ನಿರೋಧಕಗಳನ್ನುನಿಯಮಿತವಾಗಿ ಸಿಂಪಡಿಸಬೇಕು’ ಎಂದು ಒಕ್ಕೂಟದ ಜಂಟಿ ಗೌರವ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಹೇಳಿದ್ದಾರೆ.
ಒಂದೆರಡು ತಿಂಗಳಿಂದ ಹೋಟೆಲ್ ಉದ್ಯಮವು ಭಾರಿ ಸಂಕಷ್ಟವನ್ನು ಎದುರಿಸುತ್ತಿದೆ. ವರಮಾನವು ಗಣನೀಯವಾಗಿ ತಗ್ಗಿದೆ. ಕೊಠಡಿ ಕಾಯ್ದಿರಿಸುವಿಕೆ ಬಹುಪಾಲು ರದ್ದಾಗಿವೆ, ಹೊಸ ಕಾಯ್ದಿರಿಸುವಿಕೆಗಳು ಇಲ್ಲ. ರೆಸ್ಟೊರೆಂಟ್ಗಳಿಗೆ ಬರುವ ಜನರ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.