ADVERTISEMENT

ರೇಡಿಯೊ ಖಗೋಳ ವಿಜ್ಞಾನಿ ಗೋವಿಂದ್‌ ಸ್ವರೂಪ್ ಇನ್ನಿಲ್ಲ

ಪಿಟಿಐ
Published 8 ಸೆಪ್ಟೆಂಬರ್ 2020, 12:56 IST
Last Updated 8 ಸೆಪ್ಟೆಂಬರ್ 2020, 12:56 IST
ಗೋವಿಂದ್‌ ಸ್ವರೂಪ್‌
ಗೋವಿಂದ್‌ ಸ್ವರೂಪ್‌   

ಪುಣೆ: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ರೇಡಿಯೊ ಖಗೋಳವಿಜ್ಞಾನಿ ಗೋವಿಂದ್‌ ಸ್ವರೂಪ್‌(91) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು ಎಂದು ರೇಡಿಯೊ ಖಭೌತ ವಿಜ್ಞಾನ ರಾಷ್ಟ್ರೀಯ ಕೇಂದ್ರ(ಎನ್‌ಸಿಆರ್‌ಎ) ಪ್ರಕಟಣೆಯಲ್ಲಿ ತಿಳಿಸಿದೆ.

‘ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌’ನ ಭಾಗವಾಗಿದ್ದ ಎನ್‌ಸಿಆರ್‌ಎದ ಸಂಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಪದ್ಮಶ್ರೀ ಪುರಸ್ಕೃತ ಸ್ವರೂಪ್‌, ಭಾರತೀಯ ರೇಡಿಯೊ ಖಗೋಳವಿಜ್ಞಾನದ ರಾಯಭಾರಿಯಾಗಿದ್ದರು.

‘1929ರಲ್ಲಿ ಜನಿಸಿದ ಅವರು, 1950ರಲ್ಲಿ ಅಲಹಾಬಾದ್‌ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಪದವಿಯನ್ನು ಪಡೆದಿದ್ದರು. 1961ರಲ್ಲಿ ಅಮೆರಿಕದ ಸ್ಟ್ಯಾನ್ಫರ್ಡ್‌ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪಡೆದ ಸ್ವರೂಪ್‌ ಅವರು, ಖಗೋಳವಿಜ್ಞಾನದಲ್ಲಿ ಹಲವು ಸಂಶೋಧನೆಗಳಿಂದ ಗುರುತಿಸಿಕೊಂಡಿದ್ದಾರೆ. ಅತ್ಯಾಧುನಿಕ ಹಾಗೂ ವಿಶ್ವದರ್ಜೆಯ ಊಟಿ ರೇಡಿಯೊ ಟೆಲಿಸ್ಕೋಪ್‌, ಜೈಂಟ್‌ ಮೀಟರ್‌ವೇವ್‌ ರೇಡಿಯೊ ಟೆಲಿಸ್ಕೋಪ್‌ ನಿರ್ಮಾಣದಲ್ಲಿ ಇವರ ಮುಂದಾಳತ್ವವು, ರೇಡಿಯೊ ಖಗೋಳವಿಜ್ಞಾನ ಸಂಶೋಧನೆಯಲ್ಲಿ ಭಾರತವನ್ನು ಸದೃಢವಾಗಿ ನೆಲೆಯೂರುವಂತೆ ಮಾಡಿದೆ’ ಎಂದು ಎನ್‌ಸಿಆರ್‌ಎ ಉಲ್ಲೇಖಿಸಿದೆ.

ADVERTISEMENT

ಪ್ರಧಾನಿ ಸಂತಾಪ:ಗೋವಿಂದ್‌ ಸ್ವರೂಪ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದು, ಅವರೊಬ್ಬರು ‘ಅಸಾಧಾರಣ ವಿಜ್ಞಾನಿ’ ಎಂದು ಬಣ್ಣಿಸಿದ್ದಾರೆ.

‘ಪ್ರೊಫೆಸರ್‌ ಗೋವಿಂದ್‌ ಸ್ವರೂಪ್‌ ಅವರು ಅಸಾಧಾರಣ ವಿಜ್ಞಾನಿಯಾಗಿದ್ದರು. ರೇಡಿಯೊ ಖಗೋಳವಿಜ್ಞಾನದಲ್ಲಿ ಅವರ ಸಾಧನೆ ಅಪಾರ ಹಾಗೂ ಜಾಗತಿಕ ಮನ್ನಣೆ ಪಡೆದಿದೆ. ಅವರ ನಿಧನದಿಂದ ನೋವಾಗಿದೆ’ ಎಂದು ಟ್ವೀಟ್‌ ಮೂಲಕ ಹೇಳಿರುವ ಮೋದಿ ಅವರು, ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರು ಬರೆದ ಲೇಖವೊಂದನ್ನು ಟ್ಯಾಗ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.