ADVERTISEMENT

ಮುಂಬೈನಲ್ಲೂ ಎನ್‌ಆರ್‌ಸಿ?

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:00 IST
Last Updated 8 ಸೆಪ್ಟೆಂಬರ್ 2019, 20:00 IST
   

ಮುಂಬೈ: ಮಹಾರಾಷ್ಟ್ರ ಸರ್ಕಾರವು ಮುಂಬೈ ಮಹಾನಗರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶೀಯರನ್ನು ಇರಿಸಲು ಬಂಧನ ಕೇಂದ್ರ ನಿರ್ಮಾಣಕ್ಕಾಗಿ ನವಿ ಮುಂಬೈ ಸಮೀಪದ ನೆರೂಲ್‌ನಲ್ಲಿ 2ರಿಂದ 3 ಎಕರೆ ಜಾಗ ನೀಡುವಂತೆ ರಾಜ್ಯ ಗೃಹ ಸಚಿವಾಲಯವು ನವಿ ಮುಂಬೈ ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆದಿದೆ ಎಂದು ಎನ್‌ಡಿ ಟಿ.ವಿ. ವರದಿ ಮಾಡಿದೆ.

‘ನೆರೂಲ್‌ನಲ್ಲಿ 2ರಿಂದ 3 ಎಕರೆ ಜಾಗವನ್ನು ಮಂಜೂರು ಮಾಡುವಂತೆ ಪತ್ರ ಬಂದಿರುವುದು ನಿಜ’ ಎಂದು ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮದ ಮೂಲಗಳು ಖಚಿತಪಡಿಸಿವೆ. ಆದರೆ ಇಂಥ ಪತ್ರ ಬರೆದಿಲ್ಲ ಎಂದು ಗೃಹಸಚಿವಾಲಯವು ಹೇಳಿದೆ. ಕೇಂದ್ರ ಸರ್ಕಾರವು ಈ ಹಿಂದೆ ನೀಡಿದ ಸೂಚನೆಯ ಪ್ರಕಾರ ಎಲ್ಲಾ ವಲಸೆ ಕೇಂದ್ರಗಳಲ್ಲಿ ವಲಸಿಗರ ಬಂಧನ ಕೇಂದ್ರಗಳನ್ನು ನಿರ್ಮಿಸುವುದು ಅಗತ್ಯವಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಮುಂಬೈಯಲ್ಲಿ ಬಾಂಗ್ಲಾದ ಅಕ್ರಮ ವಲಸಿಗರು ದೊಡ್ಡ ಸಂಖ್ಯೆಯಲ್ಲಿ ನೆಲೆಸುತ್ತಿದ್ದು, ಅವರನ್ನು ಹೊರಗೆ ಕಳುಹಿಸುವ ಕೆಲಸ ಆಗಬೇಕು’ ಎಂದು ಶಿವಸೇನಾದ ನಾಯಕ ಅರವಿಂದ ಸಾವಂತ್‌ ಅವರು ಇತ್ತೀಚೆಗೆ ಒತ್ತಾಯಿಸಿದ್ದರು.

ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದೆ. ಇದೇ ಸಂರ್ಭದಲ್ಲಿ ಎನ್‌ಆರ್‌ಸಿ ಜಾರಿಯ ಮಾತುಗಳೂ ಕೇಳಿಬರುತ್ತಿರುವುದರಿಂದ ಅಕ್ರಮ ವಲಸಿಗರ ವಿಚಾರವು ಚುನಾವಣಾ ವಿಷಯವಾಗುವ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.