ಬಂಗಾಳದಲ್ಲಿ ಆ.1ರಿಂದ ನರೇಗಾ ಅನುಷ್ಠಾನ ಮಾಡಿ: ಕೇಂದ್ರಕ್ಕೆ ಕಲ್ಕತ್ತ ಹೈಕೋರ್ಟ್
– ಎ.ಐ ಚಿತ್ರ
ಕೋಲ್ಕತ್ತ: ಆಗಸ್ಟ್ 1 ರಿಂದ ಪಶ್ಚಿಮ ಬಂಗಾಳದಲ್ಲಿ ನರೇಗಾ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕಲ್ಕತ್ತ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಯೋಜನೆ ಜಾರಿಗೊಳಿಸುವಾಗ ಯಾವುದೇ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು, ದೇಶದ ಇತರ ರಾಜ್ಯಗಳಲ್ಲಿ ವಿಧಿಸದ ವಿಶೇಷ ಷರತ್ತುಗಳು, ನಿರ್ಬಂಧಗಳು ಮತ್ತು ನಿಬಂಧನೆಗಳನ್ನು ವಿಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೈಕೋರ್ಟ್ ಹೇಳಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಡೆದ ಅಕ್ರಮಗಳ ಆರೋಪಗಳ ಬಗ್ಗೆ ಕೇಂದ್ರವು ತನ್ನ ತನಿಖೆಯನ್ನು ಮುಂದುವರಿಸಲು ಅನುಮತಿ ನೀಡಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಅವರ ನೇತೃತ್ವದ ವಿಭಾಗೀಯ ಪೀಠವು ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಯೋಜನೆಯನ್ನು ಪೂರ್ವಭಾವಿಯಾಗಿ ಜಾರಿಗೆ ತರಬೇಕೆಂದು ನಿರ್ದೇಶಿಸಿತು.
ಮೂರು ವರ್ಷಗಳ ಹಿಂದೆ ನಡೆದ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಯೋಜನೆಯ ಅನುಷ್ಠಾನದ ಉಸ್ತುವಾರಿ ವಹಿಸಿರುವ ಅಧಿಕಾರಿಗಳು ವಿಶೇಷ ಷರತ್ತುಗಳನ್ನು ವಿಧಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ನರೇಗಾ ಯೋಜನೆಯಡಿ ವೇತನ ವಿತರಣೆಯಲ್ಲಿ ಕೇಂದ್ರವು ಕೆಲವು ಅಕ್ರಮಗಳನ್ನು ಎತ್ತಿ ತೋರಿಸಿದೆ ಎಂಬುದು ವಿವಾದವಲ್ಲ ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಚೈತಾಲಿ ಚಟರ್ಜಿ (ದಾಸ್) ಅವರನ್ನೂ ಒಳಗೊಂಡ ಪೀಠವು, ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ವಸೂಲಿ ಮಾಡಲಾದ ಮೊತ್ತವು ಪಶ್ಚಿಮ ಬಂಗಾಳ ನರೇಗಾದ ರಾಜ್ಯ ನೋಡಲ್ ಏಜೆನ್ಸಿಯ ಬ್ಯಾಂಕ್ ಖಾತೆಯಲ್ಲಿ ಇದೆ ಎನ್ನುವುದನ್ನು ಗಮನಿಸಿತು.
ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಯೋಜನೆಯ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನ ಮಾಡುತಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.