ADVERTISEMENT

ನಕ್ಸಲ್ ಪೀಡಿತ ಜಿಲ್ಲೆಗಳು 126ರಿಂದ 70ಕ್ಕೆ ಇಳಿದಿವೆ: ರಾಮನಾಥ ಕೋವಿಂದ್

Ram Nath Kovind naxals violence

ಪಿಟಿಐ
Published 31 ಜನವರಿ 2022, 10:45 IST
Last Updated 31 ಜನವರಿ 2022, 10:45 IST
ರಾಷ್ಟ್ರಪತಿ ರಾಮನಾಥ ಕೋವಿಂದ್
ರಾಷ್ಟ್ರಪತಿ ರಾಮನಾಥ ಕೋವಿಂದ್   

ನವದೆಹಲಿ: ವರ್ಷಗಳು ಕಳೆದಂತೆ ನಕ್ಸಲರು ಕಾರ್ಯನಿರ್ವಹಿಸುವ ಮತ್ತು ಹಿಂಸಾಚಾರ ನಡೆಸುವ ಪ್ರದೇಶಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಹಿಂದೆ 126 ಜಿಲ್ಲೆಗಳಲ್ಲಿ ಇದ್ದ ನಕ್ಸಲ್ ಹಾವಳಿ ಇದೀಗ 70 ಜಿಲ್ಲೆಗಳಿಗೆ ಇಳಿಕೆಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿಳಿಸಿದ್ದಾರೆ.

ಬಜೆಟ್ ಅಧಿವೇಶನದ ಆರಂಭದಲ್ಲಿ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ದಶಕಗಳ ಕಾಲದ ಸಂಘರ್ಷವನ್ನು ಕೊನೆಗೊಳಿಸಲು ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಶಾಂತಿ ಮತ್ತು ಸಮೃದ್ಧಿಯ ಹೊಸ ಅಧ್ಯಾಯವಾಗಿದೆ. 'ನನ್ನ ಸರ್ಕಾರದ ಸಂಘಟಿತ ಪ್ರಯತ್ನದಿಂದಾಗಿ ದೇಶದಲ್ಲಿ ಇಂದು ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯು 126 ರಿಂದ 70 ಕ್ಕೆ ಇಳಿದಿದೆ ಎಂದು ಹೇಳಿದರು.

ಸೆ. 21, 2020 ರಂದು, ದೇಶದ 11 ರಾಜ್ಯಗಳಲ್ಲಿ ಒಟ್ಟು 90 ಜಿಲ್ಲೆಗಳು ನಕ್ಸಲ್ ಅಥವಾ ಎಡಪಂಥೀಯ ಉಗ್ರವಾದ (LWE) ಪೀಡಿತ ಎಂದು ಪರಿಗಣಿಸಲಾಗಿದೆ ಮತ್ತು ಗೃಹ ಸಚಿವಾಲಯದ ಭದ್ರತಾ ಸಂಬಂಧಿತ ವೆಚ್ಚ ಯೋಜನೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಆಗಿನ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ರಾಜ್ಯಸಭೆಗೆ ತಿಳಿಸಿದ್ದರು.

ADVERTISEMENT

2019 ರಲ್ಲಿ 61 ಜಿಲ್ಲೆಗಳಲ್ಲಿ ಮತ್ತು 2020 ರ ಮೊದಲಾರ್ಧದಲ್ಲಿ ಕೇವಲ 46 ಜಿಲ್ಲೆಗಳಲ್ಲಿ ಎಡಪಂಥೀಯ ಉಗ್ರವಾದ ಸಂಬಂಧಿತ ಹಿಂಸಾತ್ಮಕ ಘಟನೆಗಳು ವರದಿಯಾಗಿವೆ ಎಂದು ರೆಡ್ಡಿ ಹೇಳಿದ್ದರು.

ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2004-2020 ರ ನಡುವೆ ಭಾರತದ ವಿವಿಧ ಭಾಗಗಳಲ್ಲಿ ಮಾವೋವಾದಿಗಳಿಂದ 8,380 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಬುಡಕಟ್ಟು ಜನಾಂಗದವರು. ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲ್ಲುವ ಮುನ್ನ ಅವರನ್ನು ಸಾಮಾನ್ಯವಾಗಿ 'ಪೊಲೀಸ್ ಮಾಹಿತಿದಾರರು' ಎಂದು ಬ್ರಾಂಡ್ ಮಾಡಲಾಯಿತು.

ಈಶಾನ್ಯದಲ್ಲಿನ ದಂಗೆಯನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು, ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಮೋದಿ ಸರ್ಕಾರದ ಪ್ರಯತ್ನಗಳು 'ಐತಿಹಾಸಿಕ ಯಶಸ್ಸು' ಗಳಿಸಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.