
ನವದೆಹಲಿ: ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 7ಕ್ಕೆ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯು 11 ಹಾಗೂ ಡಿಸೆಂಬರ್ನಲ್ಲಿ 8 ಇತ್ತು. ಇದೀಗ ಅದು 7ಕ್ಕೆ ಇಳಿದಿದೆ. ಇವುಗಳನ್ನು ‘ಹೆಚ್ಚು ಬಾಧಿತ, ಕಳವಳಕಾರಿ ಹಾಗೂ ಇತರ ಎಡಪಂಥೀಯ ಉಗ್ರವಾದದಿಂದ ತೊಂದರೆಗೀಡಾಗಿರುವ ಜಿಲ್ಲೆ’ಗಳೆಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಛತ್ತೀಸಗಢದ ಬಿಜಾಪುರ, ನಾರಾಯಣಪುರ, ಸುಕ್ಮಾ, ಕಾಂಕೇರ್ ಹಾಗೂ ದಂತೇವಾಡ, ಜಾರ್ಖಂಡ್ನ ಪಶ್ಚಿಮ ಸಿಂಗಭೂಮ್ ಮತ್ತು ಒಡಿಶಾದ ಕಂಧಮಾಲ್ ಜಿಲ್ಲೆಗಳನ್ನು ಸದ್ಯ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾಂಕೇರ್ ಹಾಗೂ ಪಶ್ಚಿಮ ಸಿಂಗಭೂಮ್ ಜಿಲ್ಲೆಗಳು ಆತಂಕಕಾರಿ ವಾತಾವರಣ ಇರುವ ಪ್ರದೇಶಗಳೆನಿಸಿದ್ದು, ಇಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸುತ್ತಿವೆ. ಆದರೆ, ನಕ್ಸಲ್ ವಿರೋಧಿ ಕಾರ್ಯಾಚರಣೆಯ ಅಗತ್ಯವಿದೆ ಎಂದಿದ್ದಾರೆ.
ದಂತೇವಾಡ ಹಾಗೂ ಕಂಧಮಾಲ್ ಇತರ ಎಡಪಂಥೀಯ ಉಗ್ರವಾದದಿಂದ ತೊಂದರೆಗೀಡಾಗಿರುವ ಜಿಲ್ಲೆಗಳ ವಿಭಾಗದಲ್ಲಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.