ಜೈಪುರ: ತಾಯಿ ಮೃತಪಟ್ಟಿದ್ದಾರೆ. ಆದರೆ, ಕೊರೊನಾ ವೈರಸ್ ಸೋಂಕಿತರ ಐಸೊಲೇಷನ್ ವಾರ್ಡ್ನಲ್ಲಿ ಕರ್ತವ್ಯ ನಿರತ ಶುಶ್ರೂಷಕನಿಗೆ ಹೊರ ಬಾರಲಾರದ ಸ್ಥಿತಿ. ತಾಯಿಯ ಅಂತಿಮ ಕಾರ್ಯವನ್ನು ವಿಡಿಯೊ ಕಾಲ್ ಮೂಲಕ ಮೊಬೈಲ್ ಫೋನ್ನಲ್ಲೇ ಮಾಡಿ ಮುಗಿಸಿದರು!
ಜೈಪುರದ ಎಸ್ಎಂಎಸ್ ಆಸ್ಪತ್ರೆಯಲ್ಲಿ ರಾಮ್ ಮೂರ್ತಿ ಮೀನಾ ಶುಶ್ರೂಷಕನಾಗಿ (ನರ್ಸ್) ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೋವಿಡ್–19 ಐಸೊಲೇಷನ್ ವಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದತಾಯಿಯ ಅಂತಿಮ ಸಂಸ್ಕಾರದಲ್ಲಿ ನೇರವಾಗಿ ಭಾಗಿಯಾಗಲು ಸಾಧ್ಯವಾಗಲಿಲ್ಲ.
'93 ವರ್ಷ ವಯಸ್ಸಿನ ನನ್ನ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗದಿರುವುದು ಖಂಡಿತವಾಗಿಯೂ ನೋವಿನ ಸಂಗತಿ. ಮಾರ್ಚ್ 30ರಂದು ನನ್ನ ತಾಯಿ ಮೃತಪಟ್ಟಾಗ,ಐಸೊಲೇಷನ್ ವಾರ್ಡ್ನ ನರ್ಸಿಂಗ್ ಹೊಣೆ (ಇನ್–ಚಾರ್ಜ್) ನನ್ನದಾಗಿತ್ತು. ನಾನು ತಾಯಿಯ ಅಂತಿಮ ದರ್ಶನವನ್ನು ಮೊಬೈಲ್ ಫೋನ್ನಲ್ಲಿ ವಿಡಿಯೊ ಕಾಲ್ ಮೂಲಕ ಮಾಡಿದೆ' ಎಂದು ರಾಮ್ ಮೂರ್ತಿ ಹೇಳಿದ್ದಾರೆ.
'ನನ್ನ ತಂದೆ ಮತ್ತು ಮೂವರು ಅಣ್ಣಂದಿರು ಅಂತಿಮ ಕಾರ್ಯ ನೆರವೇರಿಸಿದರು, ನಾನು ವಿಡಿಯೊ ಕಾಲ್ ಮೂಲಕವೇ ಭಾಗಿಯಾದೆ. ಸೋಂಕು ಸಾಂಕ್ರಾಮಿಕವಾಗಿರುವ ಈ ಸಮಯದಲ್ಲಿ ರೋಗಿಗಳತ್ತ ಗಮನ ಹರಿಸುವುದು ಬಹಳ ಮುಖ್ಯವಾದ ಕಾರ್ಯ' ಎಂದು ಹೇಳಿದ್ದಾರೆ.
ಏಪ್ರಿಲ್ 3, ಕ್ವಾರಂಟೈನ್ಗೆ ಕಳುಹಿಸುವವರೆಗೂ ರಾಮ್ ಮೂರ್ತಿ ನರ್ಸಿಂಗ್ ಸೇವೆಯಲ್ಲಿ ಮಗ್ನರಾಗಿದ್ದರು. ಆಸ್ಪತ್ರೆಯ ಕೋವಿಡ್–19 ಐಸೊಲೇಷನ್ ವಾರ್ಡ್ಗಳಲ್ಲಿದ್ದ ಸಿಬ್ಬಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ದಿನಗಳವರೆಗೂ ಪ್ರತ್ಯೇಕವಾಗಿರಿಸಲಾಗುತ್ತಿದೆ.
'ಐಸೊಲೇಷನ್ ವಾರ್ಡ್ಗಳಲ್ಲಿ ಕಾರ್ಯ ನಿರ್ವಹಿಸುವುದು ಸುಲಭವಾಗಿರುವುದಿಲ್ಲ, ರೋಗಿಗಳನ್ನು ಸಿಬ್ಬಂದಿಗಳೇ ನೋಡಿಕೊಳ್ಳಬೇಕು. ನಾವೂ ಸಹ ಸೋಂಕಿಗೆ ಒಳಗಾಗಿರುತ್ತೇವೆ, ಹಾಗಾಗಿಯೇ ನಾವೂ ಐಸೊಲೇಷನ್ನಲ್ಲಿಯೇ ಬದುಕು ಮುಂದುವರಿಸುತ್ತೇವೆ. ಇದು ನಮ್ಮೆಲ್ಲರಿಗೂ ಅತ್ಯಂತ ಕಠಿಣವಾದ ಸಮಯ' ಎಂದು ಅನುಭವ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.