ನಗದು ಹಣ
ಭುವನೇಶ್ವರ: ಒಡಿಶಾ ಜಾಗೃತ ದಳದ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಗಣಿ ಇಲಾಖೆಯ ಅಧಿಕಾರಿ ದೇವವ್ರತ ಮೊಹಾಂತಿ ಎಂಬುವವರ ಮನೆಯಿಂದ ದಾಖಲೆ ಇಲ್ಲದ ₹4 ಕೋಟಿ ಹಣವನ್ನು ಜಪ್ತಿ ಮಾಡಿದ್ಧಾರೆ.
ಆದರೆ, ಕುತೂಹಲದ ಸಂಗತಿ ಎಂದರೆ, ಆತ ಕಟಕ್ನ ಕಲ್ಲಿದ್ದಲು ವ್ಯಾಪಾರಿಯಿಂದ ₹30,000 ಲಂಚ ಪಡೆಯುತ್ತಿದ್ದಾಗ ಹಿಂದಿನ ರಾತ್ರಿ ಆತನನ್ನು ಬಂಧಿಸಲಾಗಿತ್ತು. ಪರಿಶೀಲನೆ ವೇಳೆ ಭಾರಿ ಪ್ರಮಾಣದ ಹಣ ಸಿಕ್ಕಿದೆ.
ಲಂಚ ಪ್ರಕರಣದಲ್ಲಿ ವಶಪಡಿಸಿಕೊಂಡ ಅತಿ ಹೆಚ್ಚು ಪ್ರಮಾಣದ ನಗದು ಇದಾಗಿದೆ ಎಂದು ಜಾಗೃತ ದಳದ ನಿರ್ದೆಶಕ ಯಶವಂತ್ ಜೇತ್ವಾ ಹೇಳಿದ್ದಾರೆ.
ಕಟಕ್ನಲ್ಲಿ ಗಣಿ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮೊಹಂತಿ, ಕಲ್ಲಿದ್ದಲು ಡಿಪೊ ಕಾರ್ಯಾಚರಣೆಗೆ ಅನುವು ಮಾಡಿಕೊಡಲು ಸಾರಿಗೆ ಅನುಮತಿ ನೀಡಲು ಪರವಾನಗಿ ಪಡೆದ ಉದ್ಯಮಿಯಿಂದ ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ.
ಅವರ ಬಂಧನದ ನಂತರ, ಪಾಟಿಯಾದ ಶ್ರೀ ವಿಹಾರ್ನಲ್ಲಿರುವ ಅವರ ಫ್ಲಾಟ್ನಲ್ಲಿ ಶೋಧ ನಡೆಸಲಾಗಿದ್ದು, . ತನಿಖಾಧಿಕಾರಿಗಳು ಟ್ರಾಲಿ ಬ್ಯಾಗ್ಗಳು ಮತ್ತು ಅಲ್ಮೆರಾಗಳಲ್ಲಿ ಅಡಗಿಸಿಟ್ಟಿದ್ದ ₹4 ಕೋಟಿಗೂ ಹೆಚ್ಚು ಹಣವನ್ನು ಪತ್ತೆಹಚ್ಚಿದ್ದಾರೆ. ಅವರ ಕಚೇರಿ ಡ್ರಾಯರ್ನಿಂದ ಹೆಚ್ಚುವರಿಯಾಗಿ ₹1.2 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಇಲ್ಲಿಯವರೆಗೆ ಪತ್ತೆಯಾದ ಅಧಿಕಾರಿಯ ಇತರೆ ಆಸ್ತಿಗಳ ಪೈಕಿ, ಭುವನೇಶ್ವರದ ಪಹಲಾದಲ್ಲಿರುವ ಒಂದು ಎರಡು ಅಂತಸ್ತಿನ ಕಟ್ಟಡ ಮತ್ತು ಸುಮಾರು 130 ಗ್ರಾಂ ಚಿನ್ನ ಸೇರಿವೆ. ವಶಪಡಿಸಿಕೊಂಡ ಸಂಪತ್ತಿನ ಮೂಲ ಮತ್ತು ಇತರ ಅಕ್ರಮಗಳಿಗೆ ಇರುವ ಸಂಭಾವ್ಯ ಸಂಬಂಧಗಳನ್ನು ಜಾಗೃತ ದಳದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.