ADVERTISEMENT

ಗುಂಡಿನ ದಾಳಿ: ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2023, 19:21 IST
Last Updated 29 ಜನವರಿ 2023, 19:21 IST
ನಬಾ ಕಿಶೋರ್ ದಾಸ್
ನಬಾ ಕಿಶೋರ್ ದಾಸ್   

ಭುವನೇಶ್ವರ: ಪೊಲೀಸ್ ಅಧಿಕಾರಿಯೊಬ್ಬರಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಾ ಕಿಶೋರ್ ದಾಸ್ ಮೃತಪಟ್ಟಿದ್ದಾರೆ.

ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್​ನ ಗಾಂಧಿ ಚೌಕ ಎಂಬಲ್ಲಿ ಭಾನುವಾರ ಮಧ್ಯಾಹ್ನ ನಬಾ ಕಿಶೋರ್ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಗೋಪಾಲ್ ಚಂದ್ರ ದಾಸ್ ಅವರು ಸಚಿವರ ಎದೆಗೆ ಗುಂಡು ಹಾರಿಸಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ನಬಾ ದಾಸ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾರಿನಿಂದ ಕೆಳಗಿಳಿಯುವಾಗ ಈ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಕಾರಣ ತಿಳಿದಿಲ್ಲ

ಸಚಿವರ ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯನ್ನು ಸ್ಥಳೀಯರೇ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಬಂಧಿತ ಅಧಿಕಾರಿ ಸಚಿವರ ಮೇಲೆ ಗುಂಡು ಹಾರಿಸಿದ್ದು ಏಕೆ ಎಂಬ ಮಾಹಿತಿ ಲಭ್ಯವಾಗಿಲ್ಲ. ‘ಗೋಪಾಲ್‌ ದಾಸ್ ವಿಚಾರಣೆ ನಡೆಯುತ್ತಿದೆ’ ಎಂದು ಬಜರಂಗನಗರ ಎಸ್‌ಡಿಪಿಒ ಗುಪ್ತೇಶ್ವರ ಭೋಯಿ ಹೇಳಿದ್ದಾರೆ.

‘ನನ್ನ ಪತಿಯ ಮಾನಸಿಕ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ 7–8 ವರ್ಷಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದು, ಸಹಜವಾಗೇ ಇದ್ದರು. ಆದರೆ, ಅವರಿಗೆ ಸಚಿವರೊಂದಿಗೆ ವೈರತ್ಯ ಇರಲಿಲ್ಲ. ತನಿಖೆ ನಡೆದು ಸತ್ಯ ಹೊರಗೆ ಬರಬೇಕು’ ಎಂದು ಆರೋಪಿ ಪೊಲೀಸ್ ಅಧಿಕಾರಿ ಗೋಪಾಲ್ ದಾಸ್ ಅವರ ಪತ್ನಿ ಜಯಂತಿ ಹೇಳಿಕೆ ನೀಡಿದ್ದಾರೆ.

ಸಚಿವ ಕಿಶೋರ್ ದಾಸ್ ಅವರು ಈ ಮೊದಲು ಕಾಂಗ್ರೆಸ್‌ನಲ್ಲಿದ್ದರು. ಝರ್ಸುಗುಡಾದ ದೊಡ್ಡ ಕಲ್ಲಿದ್ದಲು ಗಣಿ ಉದ್ಯಮಿಗಳಲ್ಲಿ ಮೊದಲ ಸಾಲಿನಲ್ಲಿ ಇರುವ ಕಿಶೋರ್ ದಾಸ್ ಅವರು, 2019ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಡಿ ಸೇರಿದ್ದರು. ಅಲ್ಲಿಯವರೆಗೆ ಅವರು ಬಿಜೆಡಿಯ ಕಟುಟೀಕಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.