ಭುವನೇಶ್ವರ: ಆನೆ ಹಾಗೂ ಮಾನವ ಸಂಘರ್ಷ ತಪ್ಪಿಸಲು ತರಬೇತಿ ಪಡೆದ ನಾಲ್ಕು ಕುಮ್ಕಿ ಆನೆಗಳನ್ನು ಕಳುಹಿಸುವಂತೆ ಒಡಿಶಾ ಸರ್ಕಾರವು ತಮಿಳನಾಡನ್ನು ಕೋರಿದೆ.
ಆನೆ ಮತ್ತು ಮಾನವ ಸಂಘರ್ಷ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಡಿಶಾ ಸರ್ಕಾರ ಹಲವು ಸವಾಲುಗಳನ್ನು ಎದುರಿಸಿದೆ. ಈ ಕುರಿತಂತೆ ಒಡಿಶಾದ ಅರಣ್ಯ ಇಲಾಖೆಯ ಸಹ ಮುಖ್ಯ ಕಾರ್ಯದರ್ಶಿ ಸತ್ಯವ್ರತಾ ಸಾಹು ಅವರು ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿ ಸುಪ್ರಿಯಾ ಸಾಹು ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಕುಮ್ಕಿ ಆನೆಗಳನ್ನು ನಿಯೋಜಿಸುವ ಮೂಲಕ ಆನೆ–ಮಾನವ ಸಂಘರ್ಷಕ್ಕೆ ಕಾರಣವಾದ ಬೆಳೆ ನಾಶ, ಮನುಷ್ಯ ವಾಸ ಸ್ಥಳಕ್ಕೆ ದಾಳಿ ಮತ್ತು ಆನೆಗಳ ಅಸಹಜ ಸಾವು ತಡೆಗಟ್ಟಲು ನೆರವಾಗಲಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
’ಈ ಕುಮ್ಕಿ ಆನೆಗಳು ಒಡಿಶಾಕ್ಕೆ ಆಸ್ತಿಗಳಾಗಲಿವೆ. ಮನುಷ್ಯರು ಮತ್ತು ವನ್ಯಜೀವಿಗಳ ಹಿತದೃಷ್ಟಿಯಲ್ಲಿ ಇರುವ ಸಮಸ್ಯೆಯನ್ನು ತಗ್ಗಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ತರಬೇತಿ ಪಡೆದ ನಾಲ್ಕು ಆನೆಗಳು ಮತ್ತು ಮಾವುತರನ್ನು ಕಳುಹಿಸಬೇಕು. ಸ್ಥಳೀಯ ಮಾವುತರು ತರಬೇತಿ ಪಡೆಯುವವರೆಗೂ ತಮಿಳುನಾಡಿನ ಮಾವುತರ ನೆರವು ಪಡೆಯಲಾಗುವುದು’ ಎಂದು ಸಾಹು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.