ಭುವನೇಶ್ವರ್: ಒಡಿಶಾದ ಮಹಾನದಿಯಲ್ಲಿ ಸಿಲುಕಿಕೊಂಡಿದ್ದ ಆನೆಯೊಂದನ್ನು ರಕ್ಷಿಸಲು ತೆರಳಿದ್ದ ರಕ್ಷಣಾ ಪಡೆಯ ಜೊತೆಗಿದ್ದ ಟಿವಿ ಪತ್ರಕರ್ತರೊಬ್ಬರು ದುರ್ಮರಣಕ್ಕಿಡಾಗಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಕ್ಷಣಾಪಡೆಯ ಬೋಟ್ ಜೊತೆಗೆ ವರದಿ ಮಾಡಲು ತೆರಳಿದ್ದಪತ್ರಕರ್ತ ಒಟಿವಿಯ ಅರಿಂದಾಮ್ ದಾಸ್ (39) ಅವರು ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮೃತರಾಗಿದ್ದು, ಆರು ಜರನ್ನು ರಕ್ಷಿಸಲಾಗಿದೆ.
ಶುಕ್ರವಾರ ಕಟಕ್ ಬಳಿಯಮಹಾನದಿಯ ಮುಂದಾಲಿ ಬ್ಯಾರೇಜ್ ಮಧ್ಯದಲ್ಲಿ ಕಾಡಾನೆಯೊಂದು ಸಿಲುಕಿಕೊಂಡಿತ್ತು. ಆನೆಯನ್ನು ರಕ್ಷಿಸಲು ಒಡಿಶಾದ ವಿಪತ್ತು ತುರ್ತು ಕಾರ್ಯಾಚರಣೆ ಪಡೆ ತೆರಳಿತ್ತು. ಈ ವೇಳೆ ಅರಿಂದಾಮ್ ದಾಸ್ ಅವರು ಕೂಡ ವರದಿ ಮಾಡಲು ಬೋಟ್ನಲ್ಲಿ ರಕ್ಷಣಾ ಪಡೆಯ ಬೋಟ್ನಲ್ಲಿ ತೆರಳಿದ್ದರು.
ರಕ್ಷಣಾ ಪಡೆಯ ಬೋಟ್ಗೆ ಹೆದರಿದ ಆನೆ ನೀರಿನ ಸೆಳೆತ ಹೆಚ್ಚಿದ್ದ ನದಿಯಲ್ಲಿ ಓಡಾಡಿದೆ. ಇದರಿಂದ ಬೋಟ್ ಮುಗುಚಿ ಅನಾಹುತ ಸಂಭಿಸಿದೆ. ಆನೆಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರಿಂದಾಮ್ ದಾಸ್ ಅವರು ಒಡಿಶಾದ ಪ್ರಮುಖ ಸುದ್ದಿ ಚಾನೆಲ್ ಒಟಿವಿಯಲ್ಲಿ ಮುಖ್ಯ ವರದಿದಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಚಂಡಮಾರುತ, ನಕ್ಸಲ್ ಕಾರ್ಯಾಚರಣೆ, ಪ್ರಾಕೃತಿಕ ವಿಕೋಪ ಹಾಗು ವನ್ಯಜೀವಿಗಳ ಬಗ್ಗೆ ಸ್ಥಳಕ್ಕೆ ತೆರಳಿ ವರದಿ ಮಾಡುತ್ತಿದ್ದರು. ಈ ಮೂಲಕ ಅವರು ಒಡಿಶಾದಲ್ಲಿ ಹೆಸರು ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.