ADVERTISEMENT

ಭೋಪಾಲ್: ಕರ್ಣಿ ಸೇನಾ ಸದಸ್ಯನಿಗೆ ಚಾಕುವಿನಿಂದ ಇರಿದು ಕೊಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಸೆಪ್ಟೆಂಬರ್ 2022, 10:22 IST
Last Updated 4 ಸೆಪ್ಟೆಂಬರ್ 2022, 10:22 IST
ವಿಡಿಯೊ ಸ್ಕ್ರೀನ್ ಗ್ರ್ಯಾಬ್
ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ಭೋಪಾಲ್: ಬಲಪಂಥೀಯ ಸಂಘಟನೆ ಕರ್ಣಿ ಸೇನಾದ 28 ವರ್ಷದ ಸದಸ್ಯನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಶುಕ್ರವಾರ ರಾತ್ರಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ನಗರದ ಕರ್ಣಿ ಸೇನಾ ಕಾರ್ಯದರ್ಶಿ ರೋಹಿತ್ ಸಿಂಗ್ ರಜಪೂತ್ ಹತ್ಯೆಗೀಡಾದ ವ್ಯಕ್ತಿ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪಾಲಿಕೆ ಕಚೇರಿ ಎದುರೇ ಈ ಕೊಲೆ ನಡೆದಿದ್ದು, ರಕ್ಷಣೆಗೆ ಬಂದ ರೋಹಿತ್ ಸ್ನೇಹಿತ ಸಚಿನ್ ಪಟೇಲ್‌ಗೂ ಚಾಕುವಿನಿಂದ ಇರಿಯಲಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ADVERTISEMENT

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ರೋಹಿತ್ ಸಿಂಗ್ ರಜಪೂತ್ ಹತ್ಯೆ ನಡೆದಿದೆ ಎಂದು ಇಟಾರ್ಸಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಆರ್‌.ಎಸ್. ಚೌಹಾಣ್ ಹೇಳಿದ್ದಾರೆ. ರಾನು ಅಲಿಯಾಸ್ ರಾಹುಲ್ ರಜಪೂತ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ರೋಹಿತ್ ಸಿಂಗ್ ರಜಪೂತ್ ಮಾರುಕಟ್ಟೆಯ ಟೀಸ್ಟಾಲ್ ಬಳಿ ಸ್ನೇಹಿತನ ಜೊತೆ ನಿಂತಿದ್ದಾಗ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಅವರ ಜೊತೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಗಲಾಟೆ ಸಂದರ್ಭ ಮೂವರಲ್ಲಿ ಒಬ್ಬ ವ್ಯಕ್ತಿ ಚಾಕು ತೆಗೆದು ರೋಹಿತ್ ಅವರಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಮೂವರು ಆರೋಪಿಗಳಾದ ರಾಹುಲ್ ರಜಪೂತ್, ಅಂಕಿತ್ ಭಟ್ ಮತ್ತು ಇಶು ಮಾಲ್ವಿಯಾ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.