ನವದೆಹಲಿ: ‘ಭಿನ್ನಮತ’ದ ಪತ್ರ ಬರೆದ ಐದು ತಿಂಗಳ ಬಳಿಕ ಪತ್ರ ಬರೆದ ಹಿರಿಯ ಮುಖಂಡರನ್ನುಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಭೇಟಿಯಾಗಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಡೆದ ಮೊದಲ ಮುಖಾಮುಖಿ ಸಭೆ ಇದು. ಚುನಾವಣೆಗಳಲ್ಲಿ ಸತತ ಸೋಲಿನ ಬಳಿಕ ಪಕ್ಷವನ್ನು ಪುನಶ್ಚೇತನಗೊಳಿಸುವ ವಿಚಾರಗಳನ್ನು ಚರ್ಚಿಸಲು ಈ ಸಭೆ ಕರೆಯಲಾಗಿತ್ತು.
ಸೋನಿಯಾ ಅವರ ನಿವಾಸದಲ್ಲಿ ಸುಮಾರು ನಾಲ್ಕು ತಾಸು ಮಾತುಕತೆ ನಡೆಯಿತು. ‘ಭಿನ್ನಮತ’ದ ಪತ್ರ ಬರೆದ 23 ಮುಖಂಡರಲ್ಲಿ 19 ಮಂದಿ ಸಭೆಯಲ್ಲಿ ಭಾಗಿಯಾಗಿದ್ದರು. ಚಿಂತನ ಶಿಬಿರ ನಡೆಸಬೇಕು ಮತ್ತು ಪಕ್ಷದ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸಲು ಹಿರಿಯ ಮುಖಂಡರು ನೀಡಿದ್ದ ಸಲಹೆಗಳನ್ನು ಜಾರಿಗೊಳಿಸಬೇಕು ಎಂದು ಮುಖಂಡರು ಹೇಳಿದರು.
ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಸೋನಿಯಾ ಅವರು ನಡೆಸಿದ ಪ್ರಯತ್ನದ ಫಲವೇ ಈ ಸಭೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ಮರಳುವುದಕ್ಕೆ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ಪುನರ್ರಚಿಸುವುದಕ್ಕೆ ವೇದಿಕೆ ಸಿದ್ಧಪಡಿಸುವುದು ಕೂಡ ಈ ಸಭೆಯ ಉದ್ದೇಶ ಎನ್ನಲಾಗಿದೆ.
‘ಪಕ್ಷವು ಬಯಸಿದ ರೀತಿಯಲ್ಲಿ ಕೆಲಸ ಮಾಡಲು ನಾನು ಸಿದ್ಧ’ ಎಂದು ರಾಹುಲ್ ಅವರು ಸಭೆಯಲ್ಲಿ ಹೇಳಿದ್ದಾಗಿ ಕಾಂಗ್ರೆಸ್ ಮುಖಂಡ ಪವನ್ ಕುಮಾರ್ ಬನ್ಸಲ್ ತಿಳಿಸಿದ್ದಾರೆ.
ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ, ಶಶಿ ತರೂರ್, ಮನೀಶ್ ತಿವಾರಿ, ಪೃಥ್ವಿರಾಜ್ ಚವಾಣ್ ಸಭೆಯಲ್ಲಿ ಹಾಜರಿದ್ದರು. ಇವರು ಪತ್ರ ಬರೆದವರಲ್ಲಿ ಪ್ರಮುಖರು. ಪಕ್ಷದ ಹಿರಿಯ ಮುಖಂಡರಾದ ಎ.ಕೆ. ಆ್ಯಂಟನಿ, ಅಶೋಕ್ ಗೆಹ್ಲೋಟ್, ಕಮಲ್ನಾಥ್, ಅಂಬಿಕಾ ಸೋನಿ, ಪಿ. ಚಿದಂಬರಂ, ಅಜಯ ಮಾಕನ್ ಮತ್ತು ಪ್ರಿಯಾಂಕಾ ಗಾಂಧಿ ಅವರೂ ಹಾಜರಿದ್ದರು.
ಸಲಹೆಗಳು
l ಸಿಡಬ್ಲ್ಯುಸಿ ಸಭೆ ನಿಯಮಿತವಾಗಿ ನಡೆಯಬೇಕು
lಸಂಸದೀಯ ಮಂಡಳಿಗೆ ಪುನಶ್ಚೇತನ ನೀಡಬೇಕು
lಪ್ರಮುಖ ವಿಚಾರಗಳ ಬಗ್ಗೆ ಅಭಿಪ್ರಾಯ ಹಂಚಿಕೆಗೆ ಅವಕಾಶ ಬೇಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.