ADVERTISEMENT

ಮೋದಿ ನಿಲುವು ವಿಶ್ವದ ಮುಂದೊಂದು ದೇಶದ ಮುಂದೊಂದು: ಜೈರಾಮ್‌ ರಮೇಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2021, 7:02 IST
Last Updated 13 ಜೂನ್ 2021, 7:02 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ಜಿ7 ಶೃಂಗಸಭೆಯ ವರ್ಚುವಲ್‌ ಅಧಿವೇಶನದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಕೋವಿಡ್‌ ಲಸಿಕೆಗಳಿಗೆ ಹಕ್ಕುಸ್ವಾಮ್ಯ ಕೈಬಿಡುವ ಪ್ರಸ್ತಾಪಕ್ಕೆ ಬೆಂಬಲ ಸೂಚಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.

ಒಂದೆಡೆ ಕೋವಿಡ್‌ ಲಸಿಕೆಗಳ ಪೇಟೆಂಟ್‌ ತೆಗೆದು ಹಾಕಬೇಕು ಎಂದು ಸಲಹೆ ನೀಡುತ್ತಾರೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್‌ನಲ್ಲಿ ಕಂಪಲ್ಸೆರಿ ಲೈಸೆನ್ಸಿಂಗ್‌ ಬಗ್ಗೆ ಮನವಿ ಮಾಡದೆ ಮೋದಿ ಸರ್ಕಾರ ಪ್ರತ್ಯೇಕ ನಿಲುವು ತಳೆಯುತ್ತದೆ. ವಿಶ್ವದ ಮುಂದೆ ಒಂದು ನಿಲುವು, ಭಾರತದಲ್ಲಿ ಮತ್ತೊಂದು ನಿಲುವು ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಜಾಗತಿಕ ಮಟ್ಟದಲ್ಲಿ ಎದುರಿಸಲು 'ಒಂದೇ ವಿಶ್ವ, ಒಂದೇ ಆರೋಗ್ಯ' ಎಂಬ ಮಂತ್ರವನ್ನು ಪಠಿಸಬೇಕು. ವಿಶ್ವಮಟ್ಟದಲ್ಲಿ ಏಕತೆ, ಒಗ್ಗಟ್ಟು ಮತ್ತು ನಾಯಕತ್ವ ಅಗತ್ಯ ಎಂದ ಪ್ರಧಾನಿ ಮೋದಿ, ಕೋವಿಡ್‌ ಸಂಬಂಧಿತ ತಂತ್ರಜ್ಞಾನ ಮತ್ತು ಲಸಿಕೆಗಳ ಹಕ್ಕುಸ್ವಾಮ್ಯವನ್ನು ಕೈಬಿಡಲು ಡಬ್ಳ್ಯೂಟಿಒಗೆ ಸಲ್ಲಿಸಿರುವ ಪ್ರಸ್ತಾವಕ್ಕೆ ಬೆಂಬಲ ನೀಡುವಂತೆ ಜಿ7 ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದರು.

ADVERTISEMENT

ಕಂಪಲ್ಸರಿ ಲೈಸೆನ್ಸಿಂಗ್‌ ಎಂದರೆ ವೈದ್ಯಕೀಯ ತುರ್ತಿನ ಸಂದರ್ಭ ಪೇಟೆಂಟ್‌ ಹೊಂದಿರುವ ಸಂಸ್ಥೆಯ ಅನುಮತಿ ಇಲ್ಲದೆ ಪೇಟೆಂಟ್‌ ಬಳಸಿಕೊಳ್ಳಬಹುದಾದ ನೀತಿಯಾಗಿದೆ. 1994ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆ(ಡಬ್ಳ್ಯುಟಿಒ)ಯಲ್ಲಿ ಸದಸ್ಯ ರಾಷ್ಟ್ರಗಳು ಸಹಿ ಮಾಡಿ, ಅಂಗೀಕರಿಸಿದ ಟ್ರಿಪ್ಸ್‌ ಒಪ್ಪಂದದ ಪ್ರಕಾರ ವೈದ್ಯಕೀಯ ತುರ್ತಿನ ಸಂದರ್ಭ ಪೇಟೆಂಟ್‌ ಹೊಂದಿದ ಔಷಧಿ ಸಂಸ್ಥೆಯ ಅನುಮತಿಯನ್ನು ಪಡೆಯದೆ ಅಗತ್ಯ ಔಷಧಿಯನ್ನು ಉತ್ಪಾದಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.