ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿನಿಯಂತ್ರಣ ರೇಖೆಯೊಳಗೆ (ಎಲ್ಒಸಿ) ನುಸುಳಲು ಯತ್ನಿಸಿದ್ದ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆಯು ಭಾನುವಾರ ಹೇಳಿದೆ.
‘ಕೃಷ್ಣ ಘಾಟಿ ಸೆಕ್ಟರ್ನಲ್ಲಿ ಶುಕ್ರವಾರ ಉಗ್ರರ ಗುಂಪೊಂದು ಗಡಿಯೊಳಗೆ ಅಕ್ರಮವಾಗಿ ನುಸುಳು ಯತ್ನಿಸುತ್ತಿರುವುದನ್ನು ಭಾರತೀಯ ಸೇನೆಯು ತಡೆಗಟ್ಟಿತ್ತು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಡಿಯಲ್ಲಿ ಪಾಕಿಸ್ತಾನದ ಕೃತ್ಯಗಳನ್ನು ಸೇನೆಯು ವಿಫಲಗೊಳಿಸುವಲ್ಲಿ ಸಫಲವಾಗಿದ್ದು, ಗಡಿಯುದ್ದಕ್ಕೂ ಭದ್ರತಾ ಪಡೆ ಎಚ್ಚರಿಕೆ ವಹಿಸಿದೆ’ ಎಂದು ಜಮ್ಮು–ಕಾಶ್ಮೀರದ (ರಕ್ಷಣಾ) ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.
‘ನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಉಗ್ರನ ಮೃತದೇಹವನ್ನು ಘಟನಾ ಸ್ಥಳದಿಂದ ಎಳೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಒಂದು ಎಕೆ–47 ರೈಫಲ್, ಎರಡು–47 ನಿಯತಕಾಲಿಕೆಗಳು ಮತ್ತು ಕೆಲ ಆಹಾರದ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.
‘ಘಟನಾ ಸ್ಥಳದಲ್ಲಿ ದೊರೆತೆ ಆಹಾರ ಸಾಮಗ್ರಿ ಮತ್ತು ಇತರ ವಸ್ತುಗಳ ಮೇಲೆ ಪಾಕಿಸ್ತಾನದ ಗುರುತುಗಳಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳಿಗೆ ಪಾಕಿಸ್ತಾನವು ಪ್ರೋತ್ಸಾಹ ನೀಡುತ್ತಿರುವುದನ್ನು ಇದು ತೋರಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.