ಮುಂಬೈ: ಆಪರೇಷನ್ ಸಿಂಧೂರ ನಂತರ ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಕಳಿಸುತ್ತಿರುವ ಸರ್ವ ಪಕ್ಷಗಳ ನಿಯೋಗವನ್ನು ‘ಇಂಡಿ’ ಕೂಟದ(ಕಾಂಗ್ರೆಸ್ ಮತ್ತಿತರ ಪಕ್ಷಗಳ ಮೈತ್ರಿಕೂಟ) ಸಂಸದರು ಬಹಿಷ್ಕರಿಸಬೇಕಿತ್ತು ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ರಾವುತ್, ‘ಕೇಂದ್ರ ಸರ್ಕಾರದಿಂದಾದ ಪಾಪ ಮತ್ತು ಅಪರಾಧವನ್ನು ನಿಯೋಗ ಸಮರ್ಥಿಸಿಕೊಳ್ಳಬೇಕಿದೆ. ಸರ್ಕಾರದ ಖರ್ಚಿನಲ್ಲಿ ಇಂಥಾ ನಿಯೋಗ ಕಳಿಸುವ ಅಗತ್ಯ ಇರಲಿಲ್ಲ. ಅವರು ಏನು ಮಾಡಬಲ್ಲರು. ವಿದೇಶಗಳಲ್ಲಿ ನಮ್ಮ ರಾಯಭಾರಿಗಳಿದ್ದಾರೆ. ಅವರು ತಮ್ಮ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.
ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ ಅವರಿಗೆ ನಿಯೋಗವೊಂದನ್ನು ಮುನ್ನಡೆಸುವ ಹೊಣೆ ನೀಡಿದ ಸರ್ಕಾರದ ನಿಲುವನ್ನು ಟೀಕಿಸಿದ ರಾವುತ್, ’ಸಂಖ್ಯೆಯ ಕಾರಣಕ್ಕೆ ಆ ಪಕ್ಷ ಅವಕಾಶ ಪಡೆದಿದೆ’ ಎಂದರು.
‘ಪಹಲ್ಗಾಮ್ ಮತ್ತು ಆಪರೇಷನ್ ಸಿಂಧೂರ ನಂತರ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ವಿರೋಧ ಪಕ್ಷಗಳು ಆಗ್ರಹಿಸಿದ್ದವು. ಸರ್ಕಾರ ಚರ್ಚೆ ಮಾಡಲು ಸಿದ್ಧವಿಲ್ಲ. ಅಮೆರಿಕದೊಂದಿಗಿನ ವ್ಯಾಪಾರದ ಕಾರಣಕ್ಕೆ ಸಂಘರ್ಷ ನಿಂತಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವಂತಹ ಯಾವ ಒಪ್ಪಂದ ಆಯ್ತು..?’ ಎಂದು ರಾವುತ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.