ಲಖನೌ: ಇಂಧನ ಹಾಗೂ ಅನಿಲ ದರ ಏರಿಕೆಯನ್ನು ಖಂಡಿಸಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷವು(ಬಿಎಸ್ಪಿ) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
‘ಈಗಾಗಲೇ ಕೋವಿಡ್ನಿಂದಾಗಿ ತತ್ತರಿಸಿರುವ ಜನರಿಗೆ ಇನ್ನಷ್ಟು ತೊಂದರೆಯನ್ನುಂಟು ಮಾಡುವುದು ಸರಿಯಲ್ಲ’ ಎಂದುಬಿಎಸ್ಪಿ ಹೇಳಿದೆ.
‘ಕೋವಿಡ್–19ನಿಂದಾಗಿ ಉಂಟಾಗಿರುವ ನಿರುದ್ಯೋಗ, ಹಣದುಬ್ಬರ ಸಮಸ್ಯೆಗಳಿಂದ ಈಗಾಗಲೇ ಜನರು ನೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅನಗತ್ಯವಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಏರಿಸುವುದು ಸರಿಯಲ್ಲ. ಜನರ ಕಲ್ಯಾಣಕ್ಕಾಗಿ ಈ ರೀತಿ ತೆರಿಗೆ ಸಂಗ್ರಹಿಸುವುದು ತಪ್ಪು’ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಟ್ವೀಟ್ ಮಾಡಿದ್ದಾರೆ.
‘ಪದೇ ಪದೇ ಅನಗತ್ಯವಾಗಿ ಜನರ ಜೀಬಿಗೆ ಹೊರೆಯನ್ನು ಹೇರುವುದನ್ನು ಸರ್ಕಾರ ನಿಲ್ಲಿಸಬೇಕು. ಇಂಧನ ಬೆಲೆಯನ್ನು ಇಳಿಸುವ ಮೂಲಕ ಕಷ್ಟಪಟ್ಟು ದುಡಿಯುವ ಜನರು ಮತ್ತು ಮಧ್ಯಮ ವರ್ಗದ ಜನರಿಗೆ ಸರ್ಕಾರ ಬಹುದೊಡ್ಡ ಸಹಾಯ ಮಾಡಿದಂತಾಗುತ್ತದೆ’ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘ಆದಾಯ ಕಡಿಮೆಯಾಗುತ್ತಿದೆ. ವೇತನದಲ್ಲಿ ಕಡಿತವಾಗುತ್ತಿದೆ. ಹೀಗಿರುವಾಗ ಜನರು ಏನನ್ನು ತಿನ್ನಬೇಕು ಮತ್ತು ಹೇಗೆ ಉಳಿತಾಯ ಮಾಡಬೇಕು ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ. ಇದರೊಂದಿಗೆ ಪೆಟ್ರೋಲ್ ಬೆಲೆ ಏರಿಕೆಯನ್ನು ಪ್ರತಿನಿಧಿಸುವ ಕಾರ್ಟೂನ್ ಚಿತ್ರವನ್ನು ಕೂಡ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.