ADVERTISEMENT

ನಮ್ಮ ಬೇಡಿಕೆ ಆಲಿಸದಿದ್ದರೆ 5 ಕೋಟಿ ಮರಾಠರು ಮುಂಬೈಗೆ: ಮನೋಜ್‌ ಜರಾಂಗೆ

ಪಿಟಿಐ
Published 1 ಸೆಪ್ಟೆಂಬರ್ 2025, 13:08 IST
Last Updated 1 ಸೆಪ್ಟೆಂಬರ್ 2025, 13:08 IST
ಮನೋಜ್‌ ಜರಾಂಗೆ
ಮನೋಜ್‌ ಜರಾಂಗೆ   

ಮುಂಬೈ: ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ನಮ್ಮ ಮೀಸಲಾತಿ ಬೇಡಿಕೆಯನ್ನು ಆಲಿಸದಿದ್ದರೆ 5 ಕೋಟಿಗೂ ಹೆಚ್ಚು ಮರಾಠರು ಮುಂಬೈಗೆ ಬರಲಿದ್ದಾರೆ ಎಂದು ಹೋರಾಟಗಾರ ಮನೋಜ್‌ ಜರಾಂಗೆ ಅವರು ಎಚ್ಚರಿಸಿದ್ದಾರೆ.

ಆಜಾದ್‌ ಮೈದಾನದಲ್ಲಿ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಜರಾಂಗೆ, ‘ಫಡಣವೀಸ್‌ ಉದ್ದೇಶಪೂರ್ವಕವಾಗಿ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುತ್ತಿದ್ದಾರೆ’ ಎಂದು ಸೋಮವಾರ ಆರೋಪಿಸಿದರು.  

‘ಮರಾಠರಿಗೆ ಮೀಸಲಾತಿ ನೀಡುವ ನಿರ್ಧಾರವನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ರಾಜ್ಯ ಸರ್ಕಾರವು ಮರಾಠವಾಡದಲ್ಲಿರುವ ಮರಾಠರನ್ನು ಕುಣಬಿಗಳು ಎಂದು ಘೋಷಿಸಬೇಕು ಮತ್ತು ಅಂತಹ ಪ್ರಮಾಣಪತ್ರಗಳನ್ನು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳೇ ವಿತರಿಸಬಹುದು’ ಎಂದು ಹೇಳಿದರು. 

ADVERTISEMENT

ಮರಾಠಾ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡಬೇಕು ಎಂಬುದು ಅವರ ಆಗ್ರಹವಾಗಿದೆ.

ಮುಂಬೈನಲ್ಲಿ ಜನರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವಂತೆ ಮರಾಠಾ ಹೋರಾಟಗಾರರಿಗೆ ಜರಾಂಗೆ ಸಲಹೆ ನೀಡಿದರು. ಅಲ್ಲದೇ ಆಗಸ್ಟ್‌ 29ರಿಂದ ಇಲ್ಲಿಯವರೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಮೂವರು ಬೆಂಬಲಿಗರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

‘ಜರಾಂಗೆ ಪ್ರತಿಭಟನೆ ಶಾಂತಿಯುತವಾಗಿಲ್ಲ’

ಮನೋಜ್ ಜರಾಂಗೆ ನೇತೃತ್ವದ ಮರಾಠ ಮೀಸಲಾತಿ ಆಂದೋಲನದಿಂದಾಗಿ ಇಡೀ ನಗರ ಸ್ತಬ್ಧಗೊಂಡಿದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಹೇಳಿದೆ. ಅವರ ಪ್ರತಿಭಟನೆಯು ಶಾಂತಿಯುತವಾಗಿಲ್ಲ ಮತ್ತು ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿದೆ ಎಂದೂ ತಿಳಿಸಿದೆ.

ಮುಂಬೈನಲ್ಲಿ ಸಹಜ ಸ್ಥಿತಿ ಮರುಸ್ಥಾಪನೆಯಾಗಬೇಕು ಎಂದು ಹೈಕೋರ್ಟ್ ಹೇಳಿದ್ದು, ಮಂಗಳವಾರ ಮಧ್ಯಾಹ್ನದೊಳಗೆ ಪರಿಸ್ಥಿತಿಯನ್ನು ಸರಿಪಡಿಸುವಂತೆ ಮತ್ತು ಎಲ್ಲಾ ಬೀದಿಗಳನ್ನು ತೆರವುಗೊಳಿಸುವಂತೆ ಜರಾಂಗೆ ಮತ್ತು ಅವರ ಬೆಂಬಲಿಗರಿಗೆ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.