ADVERTISEMENT

ಭಾರತದಲ್ಲಿ ಆರಕ್ಕೂ ಹೆಚ್ಚು ಕೋವಿಡ್ ಲಸಿಕೆಗಳು ಬರಲಿವೆ: ಸಚಿವ ಹರ್ಷವರ್ಧನ್

ಪಿಟಿಐ
Published 13 ಮಾರ್ಚ್ 2021, 11:43 IST
Last Updated 13 ಮಾರ್ಚ್ 2021, 11:43 IST
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್   

ಭೋಪಾಲ್: ಭಾರತದಲ್ಲಿ ಇನ್ನು ಆರಕ್ಕೂ ಹೆಚ್ಚು ಕೊರೊನಾ ವೈರಸ್ ಲಸಿಕೆಗಳು ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶನಿವಾರ ಪ್ರಕಟಿಸಿದ್ದಾರೆ.

ಪರಿಸರ ಆರೋಗ್ಯದ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಹೊಸ ಹಸಿರು ಕ್ಯಾಂಪಸ್ ಅನ್ನು ಉದ್ಘಾಟಿಸಿ ಮಾತನಾಡಿ, ಇಲ್ಲಿಯವರೆಗೆ 1.84 ಕೋಟಿ ಡೋಸ್ ಕೋವಿಡ್-19 ಲಸಿಕೆ ಪ್ರಮಾಣವನ್ನು ಜನರಿಗೆ ನೀಡಲಾಗಿದ್ದು, 23 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

'ಭಾರತವು ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ, ಅದನ್ನು 71 ದೇಶಗಳಿಗೆ ನೀಡಲಾಗಿದೆ. ಇನ್ನೂ ಅನೇಕ ರಾಷ್ಟ್ರಗಳು ಲಸಿಕೆಗಳನ್ನು ಬಯಸುತ್ತಿವೆ ಮತ್ತು ಅವು ಗೊತ್ತಿಲ್ಲದ ದೇಶಗಳೇನು ಅಲ್ಲ. ಕೆನಡಾ, ಬ್ರೆಜಿಲ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳು ಭಾರತೀಯ ಲಸಿಕೆಗಳನ್ನು ಬಹಳ ಉತ್ಸಾಹದಿಂದ ಬಳಸುತ್ತಿವೆ' ಎಂದು ಹೇಳಿದರು.

ADVERTISEMENT

ಅರ್ಧ ಡಜನ್‌ಗಿಂತಲೂ ಹೆಚ್ಚು ಲಸಿಕೆಗಳು ಬರಲಿವೆ. ಶನಿವಾರ ಮುಂಜಾನೆಯವರೆಗೂ ದೇಶದಲ್ಲಿ 1.84 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ನಿನ್ನೆ ಒಂದೇ ದಿನ 20 ಲಕ್ಷ ಜನರಿಗೆ ಚುಚ್ಚುಮದ್ದು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು 'ವಿಶ್ವ ಗುರು' (ವಿಶ್ವ ನಾಯಕ) ಆಗಿ ಪರಿವರ್ತಿಸಲು ಬಯಸುತ್ತಾರೆ ಎಂದು ಹೇಳಿದರು.

'ವಿಜ್ಞಾನವನ್ನು ಗೌರವಿಸಿ. ಲಸಿಕೆ ಮೇಲಿನ ರಾಜಕೀಯವನ್ನು ಕೊನೆಗೊಳಿಸುವ ಅವಶ್ಯಕತೆಯಿದೆ. (ಲಸಿಕೆ) ಇದು ವೈಜ್ಞಾನಿಕ ಹೋರಾಟವೇ ಹೊರತು, ರಾಜಕೀಯವಲ್ಲ. ಅದಕ್ಕಾಗಿಯೇ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು'. 'ನಮ್ಮ ವಿಜ್ಞಾನಿಗಳ ಪ್ರಯತ್ನಗಳು ಪ್ರಶಂಸನೀಯವಾಗಿದ್ದು, ಅವರ ಶ್ರಮದಿಂದಾಗಿ ನಾವು ಈ ಎಲ್ಲವನ್ನು ಸಾಧಿಸಿದ್ದೇವೆ. 2020ನೇ ವರ್ಷವನ್ನು ಕೋವಿಡ್-19 ವರ್ಷವಲ್ಲದೆ, ವಿಜ್ಞಾನ ಮತ್ತು ವಿಜ್ಞಾನಿಗಳ ವರ್ಷವೆಂದು ನೆನಪಿಸಿಕೊಳ್ಳಲಾಗುವುದು. ಕೋವಿಡ್-19 ಪರೀಕ್ಷೆಗೆ ಆರಂಭದಲ್ಲಿ ಭಾರತದಲ್ಲಿ ಕೇವಲ ಒಂದು ಪ್ರಯೋಗಾಲಯವಿತ್ತು. ಆದರೆ ನಮ್ಮಲ್ಲಿ ಈಗ 2,412 ಪರೀಕ್ಷಾ ಕೇಂದ್ರಗಳಿವೆ' ಎಂದು ತಿಳಿಸಿದರು.

'ನಾವು ಕೊರೊನಾ ವೈರಸ್ ಅನ್ನು ಐಸೋಲೇಷನ್ ಮಾಡಿದ ವಿಶ್ವದ ಮೊದಲಿಗರು. ನಾವು ಅದರ ರೂಪಾಂತರವನ್ನು ಪ್ರತ್ಯೇಕಿಸಿದ್ದೇವೆ. ಮತ್ತು ನಮ್ಮ ವಿಜ್ಞಾನಿಗಳು ಲಸಿಕೆಯಲ್ಲಿ ಐಸಿಎಂಆರ್‌ಗೆ ಸಹಾಯ ಮಾಡಿದರು. ಜನರು ಈ ಕೆಲಸವನ್ನು (ಲಸಿಕೆ) ಹೊಗಳಿದ್ದಾರೆ. ಕೆಲವರು ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸಿದರು, ಆದರೆ ಕೊನೆಗೂ ಸತ್ಯವು ಗೆಲುವು ಸಾಧಿಸಿದೆ' ಎಂದರು.

ಹೆಚ್ಚುತ್ತಿರುವ ಸೋಂಕು ಪ್ರಕರಣಗಳ ಕುರಿತು ಮಾತನಾಡಿದ ಸಚಿವರು, ಈ "ಗೊಂದಲದ ಪ್ರವೃತ್ತಿ" ಅಜಾಗರೂಕತೆ ಮತ್ತು ತಪ್ಪು ತಿಳುವಳಿಕೆಯಿಂದಾಗಿದೆ. ಲಸಿಕೆ ಬಂದಿರುವುದರಿಂದ ಈಗ ಎಲ್ಲವೂ ಚೆನ್ನಾಗಿವೆ ಎಂದು ಜನರು ಭಾವಿಸುತ್ತಾರೆ. ವೈರಸ್ ವಿರುದ್ಧದ ರಕ್ಷಣೆಗಾಗಿ ಕೋವಿಡ್-19 ನಿಯಮಗಳನ್ನು ಪಾಲಿಸುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.