ಹೈದರಾಬಾದ್ (ತೆಲಂಗಾಣ): ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳುಗಳ ಸರದಾರ ಎಂದುಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಟೀಕಿಸಿದ್ದಾರೆ.
ಇಲ್ಲಿನ ಸಭೆಯೊಂದರಲ್ಲಿ ಮಾತನಾಡಿದ ಅವರು, ’ಪ್ರಧಾನಿ ಮೋದಿ ಮತ್ತು ಸುಳ್ಳುಗಳು ಜೊತೆ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಅವರ ಹೆಸರು ಚೌಕಿದಾರ ಅಲ್ಲ, ಸುಳ್ಳುಗಳ ರಾಜ. ನಮ್ಮ ರಾಜ್ಯಕ್ಕೆ ನೀವೇನು ಕೊಟ್ಟಿದ್ದೀರಿ. ರಾಜ್ಯದ ಪರವಾಗಿ ಸಂಸತ್ತಿನಲ್ಲಿ ಸಾಕಷ್ಟು ಪ್ರಸ್ತಾವನ್ನು ನೀಡಿದ್ದೇವೆ. ಆದರೆ, ಅವು ಯಾವುದೂ ಜಾರಿಯಾಗಲಿಲ್ಲ’ ಎಂದು ಹೇಳಿದರು.
ಏಪ್ರಿಲ್ 1ರಂದು ಪ್ರಧಾನಿ ನರೇಂದ್ರ ಮೋದಿತೆಲಂಗಾಣದಲ್ಲಿ ರ್ಯಾಲಿ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಒವೈಸಿ ವಿರುದ್ಧ ಹರಿಹಾಯ್ದಿದ್ದರು. ಹೈದರಾಬಾದ್ನ ಅಭಿವೃದ್ಧಿಗೆ ಒವೈಸಿ ತೊಡಕಾಗಿದ್ದಾರೆ ಎಂದು ಮೋದಿ ಟೀಕಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದ ಒವೈಸಿ, ‘ಪ್ರಧಾನಿ ಮೋದಿ ನನ್ನನ್ನು ವೇಗ ನಿಯಂತ್ರಕ ಎಂದು ಟೀಕಿಸಿದ್ದರು. ಹೌದು ಅದನ್ನು ನಾನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ನಮ್ಮ ಸಂವಿಧಾನವನ್ನು ನಾಶಪಡಿಸಬೇಕು ಎನ್ನುವವರಿಗೆ ನಾವು ತೊಡಕಾಗಿಯೇ ಇರುತ್ತೇವೆ’ ಎಂದಿದ್ದರು.
‘ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿಯೇ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೈದರಾಬಾದ್ಗೆ ಬಂದ ಮೋದಿ ಎಂದಿನಂತೆ ತಮ್ಮ ಸುಳ್ಳುಗಳನ್ನು ಹರಿಬಿಟ್ಟರು. ಬಿಜೆಪಿ ಐಟಿ ವಿಭಾಗದ ಟ್ರೋಲ್ನಂತೆ ಸುಳ್ಳುಗಳನ್ನೇ ಆಡುತ್ತಾರೆ’ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.