ಅನಂತನಾಗ (ಜಮ್ಮು ಮತ್ತು ಕಾಶ್ಮೀರ): ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ನಡೆದಿದ್ದ ಬಾಂಬ್ ದಾಳಿಗೆ ಉಗ್ರರು ಬಳಸಿದ್ದ ಕಾರಿನ ಮಾಲೀಕ ಸಜದ್ ಭಟ್ ಎಂಬಾತನನ್ನು ಸೇನೆ ಮಂಗಳವಾರ ಕೊಂದಿದೆ.
ಅನಂತನಾಗ ಜಿಲ್ಲೆಯಲ್ಲಿ ಮಂಗಳವಾರ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಘಟನೆಯಲ್ಲಿ ಜೈಷ್ ಎ ಮೊಹಮದ್ ಸಂಘಟನೆಯ ಇಬ್ಬರು ಉಗ್ರರನ್ನು ಸೇನೆ ಹೊಡೆದುರಿಳಿಸಿದೆ. ಇಬ್ಬರ ಪೈಕಿ ಒಬ್ಬಾತನನ್ನು ಸಜದ್ ಭಟ್ ಎಂದು ಗುರತಿಸಲಾಗಿದ್ದು, ಈತ ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದಿದ್ದ ಬಾಂಬ್ ದಾಳಿಗೆ ಬಳಿಸಿದ ಮಾರುತಿ ಇಕೋ ಕಾರಿನ ಮಾಲೀಕ. ಮತ್ತೊಬ್ಬನನ್ನು ತೌಸೀಫ್ ಅಹ್ಮದ್ ಭಟ್ ಎಂದು ಗುರುತು ಮಾಡಲಾಗಿದೆ.
25 ಕೆ.ಜಿಗಳಷ್ಟು ಸ್ಪೋಟಗಳನ್ನು ಸಜದ್ ಭಟ್ನ ಮಾರುತಿ ಇಕೋ ಕಾರಿನಲ್ಲಿ ಹೊತ್ತು ತಂದು ಸಿಆರ್ಪಿಎಫ್ ಯೋಧರಿದ್ದ ವಾಹನದ ಬಳಿಸ್ಫೋಟಿಸಲಾಗಿತ್ತು. ಸಜದ್ ಭಟ್ ಸೋಪಿಯನ್ ಜಿಲ್ಲೆಯ ಮದರಸಾದ ವಿದ್ಯಾರ್ಥಿಯಾಗಿದ್ದ. ಪುಲ್ವಾಮ ದಾಳಿಗೂ ಕೆಲ ದಿನಗಳಿಂದ ಈತ ಕಾಣೆಯಾಗಿದ್ದ ಎಂಬುದು ತನಿಖೆ ವೇಳೆ ಬಹಿರಂಗವಾಗಿತ್ತು.
ಪುಲ್ವಾಮ ದಾಳಿಯಲ್ಲಿ ಸಿಆರ್ಪಿಎಫ್ನ 40 ಯೋಧರು ಹುತಾತ್ಮರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.