
ನವದೆಹಲಿ: ಪಾಕಿಸ್ತಾನದ ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್ (ಜೆಇಎಂ) ಉನ್ನತ ಕಮಾಂಡರ್ ಮಸೂದ್ ಅಜರ್ ಅವರ ಕುಟುಂಬವು ಛಿದ್ರವಾಗಿದೆ ಎಂದು ಉಗ್ರ ಸಂಘಟನೆಯ ಮತ್ತೊಬ್ಬ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ಬಹಿರಂಗಪಡಿಸಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಬಂದೂಕುಧಾರಿ ಸಿಬ್ಬಂದಿಯೊಂದಿಗೆ ಕಾಣಿಸಿಕೊಂಡಿರುವ ಕಾಶ್ಮೀರಿ, ಮಸೂದ್ ಅಜರ್ ಅವರ ಅಡಗುದಾಣವನ್ನು ಗುರುತಿಸಿದ ನಂತರ ಭಾರತೀಯ ಪಡೆಗಳು ಅವರ ಮೇಲೆ ಹೇಗೆ ದಾಳಿ ಮಾಡಿದವು ಎಂಬುದನ್ನು ವಿವರಿಸಿದ್ದಾರೆ.
ಭಯೋತ್ಪಾದನೆಯನ್ನು ಸ್ವೀಕರಿಸಿ, ಈ ದೇಶದ ಗಡಿಗಳನ್ನು ರಕ್ಷಿಸುವುದಕ್ಕಾಗಿ ನಾವು ದೆಹಲಿ, ಕಾಬೂಲ್ ಮತ್ತು ಕಂದಹಾರ್ ವಿರುದ್ಧ ಹೋರಾಡಿದ್ದೇವೆ ಎಂದು ಅವನು ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು.
ಇಷ್ಟೆಲ್ಲ ತ್ಯಾಗ ಮಾಡಿದ ನಂತರ, ಮೇ 7ರಂದು, ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ದಾಳಿ ನಡೆಸಿ ಮೌಲಾನಾ ಮಸೂದ್ ಅಜರ್ ಅವರ ಕುಟುಂಬವನ್ನು ತುಂಡು ತುಂಡು ಮಾಡಿವೆ ಎಂದು ಹೇಳಿದ್ದಾನೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಉಗ್ರ ಮಸೂದ್ ಅಜರ್ ಕುಟುಂಬವನ್ನು ಕೊಂದಿರುವುದಾಗಿ ಭಾರತ ಹೇಳಿತ್ತು.
ಯೂಟ್ಯೂಬ್ ಚಾನೆಲ್ಗೆ ಅಪ್ಲೋಡ್ ಮಾಡಲಾದ ವಿಡಿಯೊದಲ್ಲಿ ಜೆಇಎಂ ಕಮಾಂಡರ್ ಇಲ್ಯಾಸ್ ಕಾಶ್ಮೀರಿ ಮಾತನಾಡಿರುವುದು ಕಂಡುಬಂದಿದೆ.
ಸೆ.6ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ‘ಮಿಷನ್ ಮುಸ್ತಾಫಾ’ ಕಾರ್ಯಾಗಾರದಲ್ಲಿ ಉರ್ದು ಭಾಷೆಯಲ್ಲಿ ಮಾತನಾಡಿರುವ ಇಲ್ಯಾಸ್, ಅಜರ್ ಕುಟುಂಬಸ್ಥರನ್ನು ಹತ್ಯೆಗೈದಿರುವ ಕುರಿತು ಆಕ್ರೋಶ ಹೊರಹಾಕಿದ್ದಾನೆ.
ಹಲವಾರು ಬಂದೂಕುಧಾರಿಗಳ ಮಧ್ಯೆ ನಿಂತು ಭಾಷಣ ಮಾಡಿರುವ ಆತ, ‘ದೇಶದ ಭೌಗೋಳಿಕ ಹಾಗೂ ಸೈದ್ಧಾಂತಿಕ ರಕ್ಷಣೆಗಾಗಿ ದೆಹಲಿ, ಕಾಬೂಲ್ ಹಾಗೂ ಕಂದಹಾರ್ನ ಮೇಲೆ ಜಿಹಾದ್ ದಾಳಿ ನಡೆಸಿದ್ದೆವು. ಎಲ್ಲ ತ್ಯಾಗವನ್ನು ಮಾಡಿದ ನಂತರವೂ, ಬವಾಲ್ಪುರದಲ್ಲಿರುವ ಸಂಘಟನೆಯ ಕೇಂದ್ರ ಕಚೇರಿ ಮೇಲೆ ಭಾರತವು ಕ್ಷಿಪಣಿ ದಾಳಿ ನಡೆಸಿದ್ದರಿಂದ ಮಸೂದ್ ಅಜರ್ನ ಕುಟುಂಬದ ಸದಸ್ಯರು ಛಿದ್ರ ಛಿದ್ರಗೊಂಡಿದ್ದರು’ ಎಂದು ಒಪ್ಪಿಕೊಂಡಿದ್ದಾನೆ.
‘ಬವಾಲ್ಪುರದಲ್ಲಿರುವ ಸುಭಾನ್ ಅಲ್ಲಾ ಜಾಮಿಯಾ ಮಸೀದಿ ಮೇಲೆ ನಡೆದ ದಾಳಿಯಲ್ಲಿ ಮಸೂದ್ ಅಜರ್ ಅಕ್ಕ, ಬಾವ, ಸೋದರ ಸಂಬಂಧಿ ಹಾಗೂ ಆತನ ಪತ್ನಿ, ಮತ್ತೊಬ್ಬ ಸೋದರ ಸಂಬಂಧಿ ಹಾಗೂ ಐವರು ಮಕ್ಕಳು ಮೃತಪಟ್ಟಿದ್ದರು. ಅಜರ್ನ ಸಹಚರ, ಆತನ ತಾಯಿ ಹಾಗೂ ಇತರ ಇಬ್ಬರು ಆಪ್ತರು ಕೂಡ ಈ ದಾಳಿಯಲ್ಲಿ ಅಸುನೀಗಿದ್ದರು’ ಎಂದು ಈ ಹಿಂದೆ ಪ್ರಕಟಣೆಯಲ್ಲಿ ಹೇಳಲಾಗಿತ್ತು.
1999ರಲ್ಲಿ ಅಪಹರಣಕ್ಕೆ ಒಳಗಾಗಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನದಲ್ಲಿದ್ದ (ಐಸಿ–814) ಪ್ರಯಾಣಿಕರನ್ನು ರಕ್ಷಿಸುವುದಕ್ಕೆ ಪ್ರತಿಯಾಗಿ ಮಸೂದ್ ಅಜರ್ನನ್ನು ಭಾರತ ಸರ್ಕಾರ ಬಿಡುಗಡೆ ಮಾಡಿತ್ತು. ನಂತರ, ಬವಾಲ್ಪುರವು ಜೆಇಎಂ ಸಂಘಟನೆ ಚಟುವಟಿಕೆಗಳ ಕೇಂದ್ರವಾಗಿದೆ.
ಭಾರತದ ನಿರಂತರ ಪ್ರಯತ್ನಗಳ ಬಳಿಕ, 2019ರಲ್ಲಿ ವಿಶ್ವಸಂಸ್ಥೆಯು ಅಜರ್ನನ್ನು ‘ಜಾಗತಿಕ ಉಗ್ರ’ ಎಂಬುದಾಗಿ ಘೋಷಿಸಿತು.
2019ರ ಏಪ್ರಿಲ್ನಿಂದ ಅಜರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಬವಾಲ್ಪುರದ ‘ಸುರಕ್ಷಿತ ಸ್ಥಳ’ವೊಂದರಲ್ಲಿ ಈತ ಅಡಗಿದ್ದಾನೆ ಎಂದು ನಂಬಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.